“ ಅಣ್ಣಾ! ”
“ ಅಯ್ಯೋ ಸಿಂಗ್ರಿ...ಎಲ್ಲಿ ಹಾಳಾಗಿ ಹೋಗಿದ್ಯೋ? ಎಷ್ಟೋ ದಿನ ಆಯ್ತಲ್ಲೋ ನಿನ್ನ ನೋಡಿ! ”
“ ದಿಲ್ಲಿಗೆ ಓಗಿದ್ದೆ ಕಣಣ್ಣ ”
“ ಎಲಾ ಇವ್ನ, ದಿಲ್ಲಿಗಾ? ಏನು ನಿನ್ನ ಮಂತ್ರಿ ಮಾಡ್ತೀನಿ ಅಂತ ಕರೆದಿದ್ರೇನ್ಲಾ ಮೋದಿ? ”
“ ಓಹೊಹೋ ಏನು ದಿಲ್ಲಿ ಎಲ್ಲ ಅವರ್ದೇನೆಯಾ? ಈಗ ಪದುಮನಾಭ ನಗ್ರದಾಗೆ ಮಾಜಿ ಪ್ರಮ, ಮುಮ ಬುಟ್ಟು ಯಾರೂ ಇಲ್ವೇನಣ್ಣ? ”
“ ಅವ್ರೆ ಅವ್ರೆ... ನೀನು ಭೋ ಬುದ್ವಂತ ಆಗ್ಬುಟ್ಟೆ ಬುಡ್ಲ....ಅದ್ಸರಿ ದಿಲ್ಲಿಗ್ಯಾಕ್ ಓಗಿದ್ದೆ? ”
“ ಅಂಕೇಳು ಮತ್ತೆ, ಯಾವ್ದೋ ವ್ಯಾಜ್ಯ ಇತ್ತು, ಸುಪ್ರೀಂ ಕೋಲ್ಟ್ಗೆ ಓಗಿದ್ದೆ. ”
“ ಹೋ ಗೊತ್ತಾತು ಬುಡು. ಅದು ನಿನ್ ಮಗಳ ಕಾಲಕ್ಕೆ ಮುಗೀತದೆ ”
“ ಏನ್ ಮಾಡೋದಣ್ಣ ನಮ್ ನ್ಯಾಯಾಲಯ್ಗೋಳೆ ಅಂಗೆ. ಈಗ ರಾಜಕೀಯ್ದೋರೆಲ್ಲ ಹೈಕೋಲ್ಟಾಗ್ ಸೋತ್ರು ಸುಪ್ರೀಂನಾಗೆ ಸ್ಟೇನೋ ಬೈಲೋ ತಗತಾರೆ....ಅದು ನ್ಯಾಯಲಯದ ಕ್ರಮ. ಮತ್ತೆ ಹೀರಿಂಗು ಪೀರಿಂಗು ಆದ್ಮೇಲೆ ಸಿಕ್ಸೆ ಆಗೋದು.”
“ ಅದ್ಸರಿ ಏನೇನ್ ನೋಡ್ದೆ ದಿಲ್ಲಿನಾಗೆ? ”
“ ಅವೇ ಸಮಾಧಿಗೋಳು....ಬಣ್ ಬಣ್ದ್ ಬಿಲ್ಡಿಂಗು. ಎಂಡ್ರಿಗೆ ಮಕ್ಳಿಗೆ ಒಂದಿಷ್ಟು ಬಟ್ಟೆ ತಂದೆ. ನಿಮ್ ಮಗೀಗೂ ಒಂದು ಪ್ಯಾಂಟು, ಟಾಪು ತಂದಿದೀನಿ ”
“ ಹೂಂ ಕಣಪ್ಪ. ಮಗಾನೇಯ ಅದು. ಆಗ್ಲೆ ಪಿಯುಸಿ ಓಯ್ತಾ ಅದೆ. ಪ್ಯಾಂಟ್ ತಂದಿದೀಯ?....ಅಲ್ಲಲೇ ಅವರ್ ಕಾಲೇಜ್ನಾಗೆ ಪ್ಯಾಂಟ್ ಇಕ್ಕಳಾಕೆ ಬುಡಲ್ವಲ್ಲೋ! ”
“ ಅದ್ಯಾವ್ ಕಾಲೇಜು ಅಂತ ಸೇರ್ಸಿದ್ಯೋ ನೀನು....ಓಗ್ಲಿ ಬುಡು ಇಂಗೇ ಎಲ್ಲಾರ ಓಡಾಡಕ್ ಆಯ್ತದೆ. ಮತ್ತೆ ಇಲ್ಲೇನಣ್ಣ ಹಲ್ಕಟ್ ರಾಜ್ಯ ಆಗೋಗದೆ”
“ ಯಾಕೋ ತಲೆಗಿಲೆ ಕೆಟ್ಟದೇನೋ? ”
“ ಏನೋ ಬಿಟ್ಟಿಯಾಗಿ ದಂತ ಭಾಗ್ಯ ಯೋಜನೆ ಮಾಡ್ತಾವ್ರಂತಲ್ಲಣ್ಣ....ಅದೇ ಒಂದ್ರೂಪಾಯಿ ಅಕ್ಕಿ ಒಳ್ಗೆ ಕಲ್ಲು-ಪಲ್ಲು ಇದ್ದು ಹಲ್ಲು ಮುರ್ದೋದ್ರೆ ದಂತಭಾಗ್ಯ, ಆಮೇಲೆ ಹಲ್ಲುನೋವು ಮರೆಯಾಕೆ ಮದ್ಯಭಾಗ್ಯ...”
“ ನಿಂದು ಯಾಕೊ ಅತಿಯಾಯ್ತು ಕಣ್ಲಾ....ಏನೋ ಪಾಪ ಮುದುಕ್ರು ಸೆಂದಾಕ್ ಕಾಣ್ಲಿ ಅಂತ ಮಾಡುದ್ರೆ, ಅನ್ನಗಿನ್ನ ಅಗಿದು ತಿನ್ಲಿ ಅಂತ ಕೊಟ್ರೆ ಇಂಗೆಲ್ಲ ಅಂತಾರೇನ್ಲಾ? ”
“ ಓಗ್ಲಿ ಬುಡಣ್ಣ. ಒಂದ್ ಪದ ಏಳ್ತೀನಿ ಕೇಳ್ತೀಯಾ? ”
“ ಪರವಾಗಿಲ್ವೆ ಕವೀನೂ ಆಗ್ಬುಟ್ಟೆ ಅನ್ನಪ್ಪಾ ಸಿಂಗ್ರಿ....”
“ ಮತ್ತೆ ಇವತ್ತು ಫೇಸ್ಬುಕ್ಕಾಗೆ ಯಾಪಾಟಿ ಕವಿಗಳು ಅಂದ್ರೆ ಅಲ್ಲಿ ಕವಿತೆಗೊಳ ಟ್ರಾಫಿಕ್ ಜಾಮ್ ಆಗೋಗೈತೆ...ಅಂಗೇ ನಂದೂ ಒಂದ್ ಪದ ಬುಡ್ತೀನಿ ಕೇಳು...
“ ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....
ನಿನ್ನ ತವರೂರ ನಾನೇನ ಬಲ್ಲೆ, ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ...ತೋರಿಸು ಬಾರೇ ತವರೂರ...
ರಿಯಲ್ ಎಸ್ಟೇಟ್ ಎಡಕ್ಕೆ ಬೀಡು, ರಿಯಲ್ ಎಸ್ಟೇಟ್ ಬಲಕ್ಕೆ ಬೀಡು, ನಟ್ಟ ನಡುವೇಲಿ ನೀ ಹೋಗು ಸಿದ್ರಾಮಯ್ಯ ಅಲ್ಲಿಹುದೆನ್ನಾ ತವರೂರು....
ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....
ಆಶ್ರಯದ ಮನೆ ಕಾಣೋ, ತಗಡಿನ ಕದ ಕಾಣೋ ಬಡಿದಾಡವೆರಡು ಹಂದಿ ಕಾಣೋ..ಅಲ್ಲಿಹುದೆನ್ನಾ ತವರೂರು....
ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....
ಊರಾಚೆ ಹಟ್ಟೀಲಿ, ಹರಿದಿರೋ ಶ್ಯಾಲೇಲಿ, ಕಟ್ಟಕಡೆ ಕಲ್ಲ ಚಪ್ಪಡಿಗೆ ಬೆರಣಿ ತಟ್ತವ್ಳೆ, ಬೆರಣಿಯ ತಟ್ತವ್ಳೆ..ಅವ್ಳೆ ಕಣೋ ನನ್ನ ಹಡೆದವ್ವ...
ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....
ಪಾಕೀಟ್ ಸಾರಾಯಿ, ಗಣೇಸ ಬೀಡಿ ಹಡೆದವ್ಗೆ ಬಲು ಆಸೆ ಸಿದ್ರಾಮಯ್ಯ, ಕೊ೦ಡ್ ಹೋಗೊ ನನ್ನ ತವರೀಗೇ...
ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....
ನಿನ್ನ ತವರೂರ ನಾನೇನ ಬಲ್ಲೆನು, ಹೊತ್ತಾಯ್ತು ಎನಗೆ, ಟೇಮಾಯ್ತು ಎಲೆ ಹೆಣ್ಣೆ, ಹೋಗಿ ಬರ್ತೀನಿ ನನ್ ದಿಲ್ಲೀಗೆ .”
...................................
“ ಯಾಕಣ್ಣ, ಕಣ್ಣಾಗ್ ನೀರು?”
“ ಊರಿನ್ ನೆನಪಾಯ್ತು ಕಣೋ. ಎಲ್ಡು ಸೀನೀರಿನ್ ಬಾವಿ ಇದ್ದೊ ಈಗ ಬಾವಿಗುಳೆಲ್ಲ ಬತ್ತೋಗಿ...ರಾಜಕೀಯ ಬಂದು ಊರೆಲ್ಲ ಏನೇನೋ ಆಗೋಗದೆ. ನೀನೇಳದ್ ನಿಜ ಕಣೋ ಇಲ್ಲಿ ಕುಂತು ಕೋಟಿಗಟ್ಲೆ ಖರ್ಚಲ್ಲಿ ಬಂಗ್ಲೆ ನವೀಕರಣ ಮಾಡ್ಕೋಳೋರ್ಗೆ ಬೆರಣಿ ತಟ್ಟೋರ ಬವಣೆ ಅರ್ಥ ಆಗಲ್ಲ ಕಣ್ಲಾ....ತುಂಬಾ ಎಮೋಷನಲ್ ಮಾಡ್ಬುಟ್ಟೆ ಕಣ್ಲಾ ನೀನು.”
“ ಈಗ ನಾವ್ ಮಾಡ್ಬೋದಾದ್ದು ಒಂದೇ ಕೆಲ್ಸ ಕಣಣ್ಣ.”
“ ಏನ್ ಹೇಳೋ ಸಿಂಗ್ರಿ ಮಾಡೇಬುಡಾನ...”
“ ಒಳ್ಳೆ ಸ್ಟ್ರಾಂಗ್ ಕಾಫಿ ಕುಡಿಯಾದು! ...”
“ ಥೂ..ಹಲ್ಕ ನನ್ಮಗ್ನೆ....ಇವಳೇ ನೋಡೂ ಸಿಂಗ್ರಿ ಬಂದಿದಾನೆ...ಎರಡು ಕಾಫಿ ಮಾಡ್ಕೊಡು ”
“ ಆಗ್ಲೆ ಏನೋ ಬೋಂಡ ವಾಸ್ನೆ ಬಂತು. ಅಂಗೆ ಅದೂ ಬಿಸಿಯಾಗ್ ಎಳ್ಡ್ ಪ್ಲೇಟ್ ಬರ್ಲಕ್ಕೋ....”