Tuesday, 28 July 2015

ಯಾಕೂಬನೆಂಬ ಖೂಳನೂ ನರಹರಿದ ಕ್ಷುದ್ರಜೀವಿಗಳೂ.......

ಯಾಕೂಬನೆಂಬ ಖೂಳನೂ ನರಹರಿದ ಕ್ಷುದ್ರಜೀವಿಗಳೂ.......

ಯಾಕೂಬನಿಗೆ ಗಲ್ಲು ಬೇಡವೆಂದು ಕೆಲವರು ಚೀರಾಡಿದ್ದು ಕೇಳಿ ಅನಾಮಿಕ ಗೋರಿಯಲ್ಲಿರುವ ಕಸಬ್ ಮತ್ತೊಮ್ಮೆ ಕಿಸಕ್ ಅಂತ ನಕ್ಕ.

ನಾನು ಸಾಮಾನ್ಯವಾಗಿ ತಾಳ್ಮೆಗೆಡುವವನಲ್ಲ. ಹಾಗೆಂದ ಮಾತ್ರಕ್ಕೆ ಶಿಕ್ಷೆ ವಿಧಿಸುವುದೇ ತಪ್ಪು ಎಂದು ಹೇಳುವವನಲ್ಲ. ಮೊನ್ನೆ ತಾನೇ ಕಾಲೇಜಿನ ಕಾರಿಡಾರ್ ಅಲ್ಲಿ ಮೇಷ್ಟ್ರುಗಳು ಒಬ್ಬ ವಿದ್ಯಾರ್ಥಿಗೆ ರಿಪೇರಿ ಮಾಡುತ್ತಿದ್ದರು. ನಾನು ಆಮೇಲೆ ಅವರನ್ನು ಕರೆಸಿ ಕೇಳಿದೆ, “ ಸಾರ್, ಅವನು ಇನ್ನೊಬ್ಬ ಅಮಾಯಕ ವಿದ್ಯಾರ್ಥಿಗೆ ತರಗತಿಯಲ್ಲಿ ಬಾಸುಂಡೆ ಬರುವಂತೆ ಬಾರಿಸಿದ್ದ....” ಅಂದರು. ನಾನು ಸುಮ್ಮನಾದೆ. ಇಂತಹ ಸಂದರ್ಭಗಳಲ್ಲಿ ನಾನು ಬಳಸುವ ಮಾನದಂಡ ಒಂದೇ, ‘ಈ ವಿದ್ಯಾರ್ಥಿಯ ಜಾಗದಲ್ಲಿ ನನ್ನ ಮಗ/ಮಗಳು ಇದ್ದಿದ್ದರೆ ನಾನೇನು ಮಾಡುತ್ತಿದ್ದೆ?’ ಎಂಬ ಪ್ರಶ್ನೆ ಕೇಳಿಕೊಳ್ಳುತ್ತೇನೆ. ಅದು ತಪರಾಕಿ ಕೊಡುವಂತಹ ತಪ್ಪಾಗಿದ್ದರೆ ಖಂಡಿತ ಮುಲಾಜಿಲ್ಲದೆ ಬಾರಿಸುವುದೇ. ನೋಯಿಸುವವರಿಗೆ ನೋವಿನ ಅನುಭವ ಮಾಡಿಸದೆ ವಿಧಿಯಿಲ್ಲ.

ಮತ್ತೊಬ್ಬರಿಗೆ ಸಾವನ್ನು ಬಯಸುವ ನೀಚನೂ ನಾನಲ್ಲ. ಆದರೆ ಈ ನೆಲ, ಜಲ, ಜನದ ವಿರುದ್ಧ ಯುದ್ಧಸಾರಿದವನನ್ನು, ನೂರಾರು ಅಮಾಯಕರನ್ನು ಕೊಂದವನನ್ನು ಬಿಟ್ಟುಬಿಡಿರೆಂದು ಹೇಳುವುದು ತಪ್ಪು. ಸಂಚಿನಲ್ಲಿ ಅವನ ಪಾತ್ರ ಖಚಿತವಾದದ್ದರಿಂದಲೇ ಮರಣದಂಡನೆ ವಿಧಿಸಲಾಗಿದೆ. ಜೀವ ಕೊಡುವ ಶಕ್ತಿ ಇಲ್ಲದ ಮೇಲೆ ಯಾಕೂಬನ ಜೀವ ತೆಗೆದರೇನು ಪ್ರಯೋಜನ? ಎಂದು ಕೇಳುವವರು ತಮ್ಮ ಮನೆಯವರ ಮೇಲೆ ಕೈಮಾಡಿದವರಿಗೆ ಕಪಾಳಕ್ಕೆ ಬಾರಿಸುತ್ತಾರೋ, ಕೈ ಮುಗಿಯುತ್ತಾರೋ? ೧೯೯೩ ರ ಮುಂಬೈ ಬಾಂಬ್ ದಾಳಿಯಲ್ಲಿ ಸತ್ತವರು ೨೫೭ ಮಂದಿ, ಗಾಯಗೊಂಡವರು ೭೧೩ ಮಂದಿ. ಈ ನೊಂದ ಬೆಂದ ಕುಟುಂಬದವರೆಲ್ಲ ಅವನನ್ನು ಕ್ಷಮಿಸುತ್ತಾರೆಯೇ? ಕೇಳಿ ನೋಡಿ, ಕಪಾಳಕ್ಕೆ ಹೊಡೆಯುತ್ತಾರೆ! ಇನ್ನು ಈ ತೀರ್ಪು ಬಂದಿರುವುದು ನ್ಯಾಯಾಲಯದಿಂದಲೇ ಹೊರತು ಯಾವುದೋ ತಳವಿಲ್ಲದ ಅರಿವಿನಿಂದಲ್ಲ. ಇಷ್ಟೊಂದು ಹೆಚ್ಚಿನ ಶಿಕ್ಷೆ ವಿಧಿಸಬೇಕೆಂದರೆ ಅದು ಗುರುತರವಾದ ಅಪರಾಧವೇ ಆಗಿರುತ್ತದೆ. ಇನ್ನು ಕಾನೂನಿನ ಎಲ್ಲ ಮಾರ್ಗಗಳನ್ನು ಅನುಸರಿಸಿ ಆತ ಕುಣಿಕೆಯಿಂದ ತಪ್ಪಿಸಿಕೊಳ್ಳಲು ನೋಡಿದ್ದಾನೆ, ಈ ನೆಲದ ಕಾನೂನು ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಬಳಿಕ ರಾಷ್ಟ್ರಪತಿಗಳಿಗೂ ಆತ ಮನವಿ ಸಲ್ಲಿಸಿದ್ದಾನೆ. ಈಗ ನಾವು ಆಲೋಚಿಸಬೇಕಾದ್ದು ಎಲ್ಲ ನ್ಯಾಯಾಧೀಶರಿಗಿಂತ, ರಾಷ್ಟ್ರಪತಿಗಳಿಗಿರುವ ಕಾನೂನು ಪರಿಣಿತಿ, ಅವರ ಕಾನೂನು ಸಲಹೆಗಾರರಿಗಿಂತ ನಮ್ಮ ಬುದ್ಧಿಜೀವಿಗಳಿಗೆ ಒಂದು ಔನ್ಸು ಬುದ್ಧಿ ಜಾಸ್ತಿಯಿದೆಯೇ ಎಂದು!

ಇನ್ನು ಈ ಪಾತಕಿಯನ್ನು ನಮ್ಮ ದೇಶದ ಸ್ವಾತಂತ್ರವೀರರಿಗೆ, ಹುತಾತ್ಮರಿಗೆ ಹೋಲಿಸಿದವರೂ ಇದ್ದಾರೆ. ಭಗತ್ ಸಿಂಗ್, ರಾಜಗುರು ಇವರೆಲ್ಲ ಲಂಡನ್ ಗೆ ನುಗ್ಗಿ ಅಲ್ಲಿನ ಅಮಾಯಕ ಪ್ರಜೆಗಳನ್ನು ಬಾಂಬಿಕ್ಕಿ ಕೊಂದರೆ? ಹೋಲಿಕೆಗೊಂದು ಮಿತಿ ಬೇಡವೆ? ಸ್ಯಾಂಡರ್ಸ್ ನನ್ನು ಕೊಂದ ಬಳಿಕ ಅಟ್ಟಿಸಿಕೊಂಡು ಬಂದ ಭಾರತೀಯ ಪೋಲಿಸ್ ಚೆನ್ನನ ಸಿಂಹನಿಗೆ ಕೆನ್ನೆ ಪಕ್ಕ ಗುಂಡು ಸವರಿಕೊಂಡು ಹೋಗುವಂತೆ ಗೋಲಿ ಚಲಾಯಿಸಿದ ಚಂದ್ರಶೇಖರ ಅಜಾದ್ ಅಪ್ರತಿಮ ಗುರಿಕಾರ, ಆದರೆ ಭಾರತೀಯನನ್ನು, ದೇಶಬಾಂಧವನನ್ನು ಕೊಲ್ಲಬಾರದೆಂದು ಅವನು ಚೆನ್ನನ ಸಿಂಹನನ್ನು ಬೆದರಿಸಿದ. ನಮ್ಮ ಕ್ರಾಂತಿಕಾರಿಗಳ ಯುದ್ಧವೇನಿದ್ದರೂ ಬ್ರಿಟಿಷ್ ಅಧಿಕಾರಿಗಳ ವಿರುದ್ಧವಿತ್ತೇ ಹೊರತು ಅವರ ವಸತಿ ಪ್ರದೇಶಗಳಿಗೆ ನುಗ್ಗಿ ಸಾಮಾನ್ಯರನ್ನು ಕೊಲ್ಲುವುದರಲ್ಲಿ ಅವರೆಂದೂ ವಿಕಟಾನಂದ ಪಡೆಯಲಿಲ್ಲ. ಲಂಡನ್ನಿನ ಕಾಕ್ಸ್ಟನ್ ಹಾಲ್ ನಲ್ಲಿ ಡೈಯರ್ ನನ್ನು ಗುಂಡಿಕ್ಕಿ ಕೊಂದ ಉಧಮ್ ಸಿಂಗ್, ಸಭಾಂಗಣದಲ್ಲಿ ಬಿಳಿಯರೇ ತುಂಬಿದ್ದರೂ ಬೇರಾರನ್ನೂ ಕೊಲ್ಲಲಿಲ್ಲ, ಗಾಯಗೊಳಿಸಲಿಲ್ಲ. ಡೈಯರ್ ಸತ್ತದ್ದು ಖಚಿತವಾದ ಬಳಿಕ ಪಿಸ್ತೂಲನ್ನು ಒಪ್ಪಿಸಿ ಬಂಧನಕ್ಕೊಳಗಾದ. ಮಾನಸಿಕ ರೋಗಿಯೆಂಬ ನೆಪದಲ್ಲಿ ತಪ್ಪಿಸಿಕೊಳ್ಳೆಂಬ ಸೂಚನೆ ಬಂದಾಗ ನಿರಾಕರಿಸಿದ, ತಾನು ಪ್ರಜ್ಞಾಪೂರ್ವಕವಾಗಿಯೇ ಡೈಯರ್ ನನ್ನು ಕೊಂದುದಾಗಿ ಒಪ್ಪಿಕೊಂಡು ಹೆಮ್ಮೆಯಿಂದಲೇ ನೇಣುಗಂಬವೇರಿದ. ಎಲ್ಲಿಯೋ ಕೂತು, ಕಪ್ಪುಹಣದಲ್ಲಿ ಕೊಂಡು, ಹೊಂಚಿ, ಬಡವರು ತಿನ್ನುವ ಕ್ಯಾರಿಯರ್ ಗಳಲ್ಲಿ ಬಾಂಬುಗಳನ್ನು ಅಡಗಿಸಿಟ್ಟು ಸಾಮಾನ್ಯರನ್ನು ಕೊಂದ ಯಾಕೂಬ್ ಎಲ್ಲಿ, ನಮ್ಮ ಸ್ವಾತಂತ್ರ ವೀರರೆಲ್ಲಿ?! ಪದೇ ಪದೇ ಜೀವಭಿಕ್ಷೆ ಬೇಡುವ ಇವನೆಲ್ಲಿ, ನೇಣುಹಗ್ಗವನ್ನು ಚುಂಬಿಸಿ ಕೊರಳಿಗಿರಿಸಿಕೊಂಡ ಅವರೆಲ್ಲಿ?!

ಯಾಕೂಬನಿಗೆ ಜೈ ಎನ್ನುವ ಬೇವಕೂಫಿತನ ಮಾಡುವ ಮುನ್ನ ಯೋಚಿಸುವುದುಚಿತ.

Tuesday, 30 June 2015

ನಿರಹಂಕಾರವೆಂಬ ರಾಮಬಾಣ

ಸಂಪಾದಕೀಯ, ವಿವೇಕಹಂಸ, ಜುಲೈ ೨೦೧೫

ನಿರಹಂಕಾರವೆಂಬ ರಾಮಬಾಣ

ಆಶ್ರಮದ ಬಾಲಕರೆಲ್ಲ ದೊಡ್ಡ ಹಾಲ್‌ನಲ್ಲಿ ಮಲಗುತ್ತಿದ್ದರು. ಅದರ ಪಕ್ಕದ ಕೊಠಡಿಯಲ್ಲಿ ಬಾಗಿಲಿನ ಹತ್ತಿರವೆ ಯಜಮಾನರು ಮಲಗುತ್ತಿದ್ದರು. ಬಾಲಕರು ರಾತ್ರಿವೇಳೆ ಮೂತ್ರ ವಿಸರ್ಜನೆಗೆ ಹೋಗಬೇಕಾದರೆ ತಾತಎಂದು ಕರೆಯುತ್ತಿದ್ದರು. ಯಜಮಾನರು ಕೂಡಲೆ ಎಚ್ಚರಗೊಂಡು ಬಂದಎನ್ನುತ್ತಿದ್ದರು, ‘ಬಂದೆಎನ್ನುತ್ತಿರಲಿಲ್ಲ. ಯಾರಾದರೂ ತಮ್ಮನ್ನು ಕಾಣಲು ಬಂದಿರುವ ವಿಷಯ ತಿಳಿದಾಗಲೂ ಬಂದ'' ಅಂತ ಹೇಳು ಎನ್ನುತ್ತಿದ್ದರೇ ಹೊರತು ಬಂದೆ'' ಅಂತ ಹೇಳು ಎನ್ನುತ್ತಿರಲಿಲ್ಲ. ಬಂದೆಎಂದರೆ ನಾನು ಬಂದೆಎಂದಾಗುತ್ತದೆ. ಅಹಂಕಾರ ಪ್ರವೇಶ ಮಾಡುತ್ತದೆ ಎಂದವರ ಭಾವನೆ.’ (ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರು, ಪ್ರೊ|| ವಿ. ಕೃಷ್ಣಶೆಟ್ಟಿ, ಪು. ೭೧). ಇದು ಹಿರಿಯ ಜೀವನವೊಂದರ ಒಂದು ಪಲುಕು. ಅಂದಿನ ಕಾಲಕ್ಕೆ ಇಡೀ ನಗರವೇ ನಿಬ್ಬೆರಗಾಗುವಷ್ಟು ಶ್ರೀಮಂತಿಕೆಯನ್ನು ಹೊಂದಿದ್ದ ದೊಡ್ಡಣ್ಣ ಶೆಟ್ಟರು ಬಡ ಮಕ್ಕಳಿಗೆಂದು ತಾವು ಸ್ಥಾಪಿಸಿದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಆಶ್ರಮದ ವಾರ್ಡನ್ ಆಗಿ ತಾವೇ ನಿಂತು ಅವರನ್ನು ಪೋಷಿಸಿದ ಪ್ರೀತಿಯ ರೀತಿಯಿದು. ಬೆಂಗಳೂರೆಂಬ ಸಾಂಸ್ಕೃತಿಕ ನಗರಕ್ಕೆ ಮಾನವೀಯ ಹೃದಯವನ್ನು ಅಳವಡಿಸುವುದಕ್ಕೆ ತಮ್ಮ ಬದುಕನ್ನೇ ಮುಡುಪಿರಿಸಿದ ಮಹನೀಯರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ದೊಡ್ಡಣ್ಣ ಶೆಟ್ಟರು. ಅವರ ಬಗ್ಗೆ ಬರೆಯಹೊರಟರೆ ಅದೇ ಒಂದು ಸಂಪುಟವಾಗುತ್ತದೆ. ಇಲ್ಲಿ ಈ ಪ್ರಸಂಗವನ್ನು ಉಲ್ಲೇಖಿಸಿದ ಕಾರಣವಿಷ್ಟೆ. ಅಹಂಕಾರವನ್ನು ಒಂದು ಎಳ್ಳಿನ ಮೊನೆಯಷ್ಟನ್ನೂ ಉಳಿಸಿಕೊಳ್ಳದ ಈ ಮಹನೀಯರ ಜೀವನದರ್ಶನ ಎಷ್ಟು ಮಹತ್ತರವಾದದ್ದು ಎಂದು ತಿಳಿಸುವುದು.

ಅಹಂಕಾರವೆಂಬುದು ಸೂಕ್ಷ್ಮರೂಪದಲ್ಲಿ ಪ್ರವೇಶಿಸಿ ಯಾವ ಯಾವ ರೂಪದಲ್ಲಿ ಬದುಕನ್ನು ಆವರಿಸಿಕೊಳ್ಳುತ್ತದೆ ಎಂಬುದನ್ನು ಊಹಿಸಿಕೊಳ್ಳಲಸಾಧ್ಯ. ಪುರಾಣದಲ್ಲಾಗಲೀ ಚರಿತ್ರೆಯಲ್ಲಾಗಲೀ ಪತನಹೊಂದಿದವರನ್ನೊಮ್ಮೆ ಪರಾಂಬರಿಸಿದಾಗ ಅರಿವಾಗುವುದು ಅವರ ಪತನಕ್ಕೆ ಕಾರಣ ಅವರ ಅಹಂಕಾರ. ಹಾಗೆಯೇ ಮಹಾತ್ಮರ ಬದುಕನ್ನು ವೀಕ್ಷಿಸಿದಾಗ ತಿಳಿಯುವುದು ಅವರು ಎತ್ತರಕ್ಕೇರಲು ಮೆಟ್ಟಿ ನಿಂತಿದ್ದು ತಮ್ಮ ಅಹಂಕಾರವನ್ನೇ ಎಂದು. ಶ್ರೀರಾಮಕೃಷ್ಣರನ್ನು ಎಲ್ಲರೂ ಅವತಾರಪುರುಷರೆಂದು ಆರಾಧಿಸಿದಾಗಲೂ ಅವರು ಹೇಳುತ್ತಿದ್ದುದು ಎಲ್ಲ ಭವತಾರಿಣಿಯ ಇಚ್ಛೆ ಎಂದು. ಹಾಗೆಯೇ ವಿವೇಕಾನಂದರು ತಮ್ಮ ಅಭಿಮಾನಿಗಳಿಗೆ ಹೇಳಿದ್ದು, “ ನನ್ನನ್ನು ಇಲ್ಲಿಟ್ಟಿರುವುದು ಗುರು ಪರಮಹಂಸರ ಕರುಣೆ. ಅವರು ಇಚ್ಛಿಸಿದರೆ ಅವರ ರೋಮರೋಮಗಳಿಂದ ನೂರಾರು ವಿವೇಕಾನಂದರು ನಿರ್ಮಾಣಗೊಳ್ಳಬಲ್ಲರು. ಈ ಬಗೆಯ ಶ್ರದ್ಧೆಯುಳ್ಳವರು ಮಾತ್ರವೇ ಅಹಂಕಾರವನ್ನು ಇಲ್ಲವಾಗಿಸಿಕೊಂಡವರು ಮಾತ್ರವೇ ಮಹತ್ತರವಾದದ್ದನ್ನು ಸಾಧಿಸಲು ಸಾಧ್ಯ. ವಾಲಿಗೆಂತಹ ಅಹಂಕಾರ! ರಾವಣನನ್ನೇ ಕಂಕುಳಿನಲ್ಲಿರಿಸಿಕೊಂಡು ಸಪ್ತಸಮುದ್ರಗಳಲ್ಲಿ ಅದ್ದಿತೆಗೆದೆ, ಇಂದ್ರಮಾಲೆಯನ್ನೇ ಕೊರಳಲ್ಲಿ ಧರಿಸಿದೆ, ದುಂದುಭಿಯನ್ನು ಕೊಂದೆ, ಹೀಗೆ. ರಾವಣನಿಗೆ ಶಿವನಿಂದಲೇ ಆತ್ಮಲಿಂಗ ಪಡೆದ ಅಹಂಕಾರ, ಕುಬೇರನನ್ನು ಕಾಡಿಸಿದ ಅಹಂಕಾರ. ಆದರೆ ಇವರಿಬ್ಬರನ್ನೂ ದಂಡಿಸಿದ್ದು ಶ್ರೀರಾಮ. ಪಟ್ಟಾಭಿಷೇಕದಿಂದ, ಸಿಂಹಾಸನಾರೋಹಣದಿಂದ ಒಂದರೆಕ್ಷಣದಲ್ಲಿ ವಂಚಿತನಾದರೂ ವಿಹ್ವಲಗೊಳ್ಳದೆ ಯಾರನ್ನೂ ಶಪಿಸದೆ ಅತ್ಯಂತ ಸರಳ ಉಡುಗೆ ತೊಟ್ಟು ಕಾಡಿಗೆ ನಡೆದ ನಿರಹಂಕಾರಿ ರಾಮ. ಹೀಗಾಗಿಯೇ ರಾವಣನ ಮಾಯಾಸ್ತ್ರಗಳಿಗಿಂತ ರಾಮನ ನಿರಹಂಕಾರದ ರಾಮಬಾಣವೇ ಹೆಚ್ಚು ಪರಿಣಾಮಕಾರಿ. ಜಗವೆಂಬ ಅಹಂಕಾರ ವಿಲಾಸದಲ್ಲಿ, ಅಹಂಕಾರ ವಿಹಾರದಲ್ಲಿ ನಾನೆಂಬ ಅಹಂ ಹೂವಾಗಿ ಅರಳುವುದೋ ಹಾವಾಗಿ ಕಾಡುವುದೋ ಎಂಬುದನ್ನು ಗಮನಿಸುತ್ತಲೇ ಇರಬೇಕು. ಹಾಗೆಂದ ಮಾತ್ರಕ್ಕೆ ನೆನೆದ ಅವಲಕ್ಕಿಯಂತೆ ಮೆದುವಾಗಿ ಎಲ್ಲರಿಂದ ಘಾತಕ್ಕೊಳಪಡಬೇಕು ಎಂದಲ್ಲ. ಸೀತೆಯನ್ನು ಹಿಂದಿರುಗಿ ಪಡೆಯಲು ಶ್ರೀರಾಮ ಪ್ರಯತ್ನಮಾಡಿದ್ದರಿಂದಲ್ಲವೇ ಅವನ ಕೋದಂಡಕ್ಕೆ ಗೌರವ ಮೂಡಿದ್ದು. ಅಭಿಮಾನಕ್ಕೆರವಾಗದಂತೆ ಅಹಂಕಾರವನ್ನು ಮೊಟಕಿಸುತ್ತಾ ಮುಂದೆ ಸಾಗಬೇಕು. ಇದೇ ಜೀವನದ ಸಾಫಲ್ಯತೆಯ ಗುಟ್ಟು.

Monday, 29 June 2015

ಶೇಕಡಾ ಎಷ್ಟು?

ಸಂಪಾದಕೀಯ, ವಿವೇಕಹಂಸ,  ಜೂನ್ ೨೦೧೨

ಶೇಕಡಾ ಎಷ್ಟು?

ಪರೀಕ್ಷೆಯ ಫಲಿತಾಂಶಗಳು ಹೊರಬಂದಿವೆ. ವರ್ಷಾಂತ್ಯದ ಓದಿನ ಸುಗ್ಗಿಯ ಕಣದಲ್ಲಿ ಜಳ್ಳು ತೂರಿ ಕಾಳು ಉಳಿಸಿಕೊಂಡೆವೆಂಬ ಭ್ರಮೆಯಲ್ಲಿ ನಾವಿದ್ದೇವೆ. ಮುಂದಿನ ನಡೆಯ ಬಗ್ಗೆ ಎಲ್ಲರ ಗಮನ. ಓದು ಜೀವನದ ಒಂದು ಭಾಗ, ಉಳಿದ ಭಾಗಗಳನ್ನು ತುಂಬಿಕೊಳ್ಳಲು ಇದು ನೆರವಾಗುತ್ತದೆಯೇ ಹೊರತು ಇದೇ ಎಲ್ಲವೂ ಅಲ್ಲ. ದುರದೃಷ್ಟವೆಂದರೆ ಇಂದಿನ ಜಗತ್ತಿನಲ್ಲಿ ವಿದ್ಯಾರ್ಥಿಗಳು ಓದಿನ ಮೂಟೆಯಾಗುತ್ತಿದ್ದಾರೆಯೇ ಹೊರತು ಉತ್ಸಾಹದ ಊಟೆಯಾಗುತ್ತಿಲ್ಲ. ಆಟ-ಊಟ-ಪಾಠದ ಬದಲಾಗಿ ಪಾಠ-(ಊಟದ ಜೊತೆಗೂ)ಪಾಠ-ಪಾಠದ ಪರಿಪಾಟಿ ಬೆಳಯುತ್ತಿದೆ. ಹದಿಹರೆಯದ ಮಕ್ಕಳು ತಮ್ಮ ಸಹಜ ವಿಕಾಸ ಪಡೆಯುವಲ್ಲಿ ತಡೆಯಾಗುತ್ತಿದೆ ಓದಿನ ಒತ್ತಡ. ಇದರಿಂದ ವ್ಯಕ್ತಿಯಾಗಲೀ ಸಮಾಜವಾಗಲೀ ಪಡೆಯುವ ಪ್ರಯೋಜನವೇನು? ನನ್ನ ವೈದ್ಯಮಿತ್ರರೊಬ್ಬರು ಕೋಳಿಫಾರಂನ ಕೋಳಿಗಳನ್ನು ಬೆಳೆಸುವ ಕ್ರೌರ್ಯವನ್ನು ಕುರಿತು ಹೇಳುತ್ತಾ, “ ಅವುಗಳ ದೇಹದ ತೂಕ ವೃದ್ಧಿಸಲು ಸ್ಟೆರಾಯ್ಡ್‌ಯುಕ್ತ ಆಹಾರವನ್ನು ನೀಡುತ್ತಾರೆ. ಪರಿಣಾಮವೇನಾಗುತ್ತದೆಂದರೆ ಅದರ ಕಾಲಿನ ವಯಸ್ಸು ಮೂರು ತಿಂಗಳಿನದಾದರೆ ಅದು ಹೊರುವುದು ಆರುತಿಂಗಳಿನ ತೂಕದ ದೇಹದ ಭಾರ!”. ನಮ್ಮ ಮಕ್ಕಳಿಗೂ ಇದನ್ನು ಅನ್ವಯಿಸಬಹುದೆ? ಎಲ್ಲರೂ ಉತ್ತಮ ಅಂಕ ಗಳಿಸುವ ಹಪಾಪಿಯಲ್ಲಿ ಬೆಳಗ್ಗೆ ಸಂಜೆ  ಮನೆಪಾಠ, ದಿನವಿಡೀ ಶಾಲೆಯ ಪಾಠ. ಅವರ ದೇಹ ಚಿಕ್ಕದಾದರೂ ನಾವು ಬಯಸುವುದು ಅದರೊಳಗೆ ವಿಶ್ವೇಶ್ವರಯ್ಯನವರ ಮಿದುಳನ್ನು!
ಓದು ಬೇಕು ನಿಜ. ಆದರೆ ಎಷ್ಟು ಎಂಬ ಆಯ್ಕೆ ಅವರವರ ಸಾಮರ್ಥ್ಯಕ್ಕೆ ಬಿಟ್ಟಿದ್ದು.

ಓದಿದವರೆಲ್ಲ ಸಮಾಜಕ್ಕೆ ಉಪಕಾರಿಗಳಾಗುತ್ತಾರೆ ಎಂಬ ಖಾತರಿಯಿಲ್ಲ. ಮಾಹಿತಿಸಂಗ್ರಹ ಮಾಡಿಕೊಂಡ ಮನುಷ್ಯ ಅದನ್ನು ಒಳಿತಿಗೂ ಬಳಸಬಹುದು, ಕೆಟ್ಟದಕ್ಕೂ ಬಳಸಬಹುದು. ಬುದ್ಧಿವಂತಿಕೆಯೊಂದಿಗೆ ಹೃದಯವಂತಿಕೆಯನ್ನು ಮೂಡಿಸದಿದ್ದರೆ ಅದನ್ನು ಶಿಕ್ಷಣವೆನ್ನಲಾಗದು. ಹಿಂದೆ ರಾಕ್ಷಸರಿದ್ದರಂತೆ. ತಪಸ್ಸು ಮಾಡಿ ಬೇಕಾದ್ದನ್ನು ಪಡೆಯುತ್ತಿದ್ದರು, ಸ್ವರ್ಗವನ್ನೂ ವಶಪಡಿಸಿಕೊಳ್ಳುತ್ತಿದ್ದರು, ಬಳಿಕ ಲೋಕಕಂಟಕರಾಗಿ ಕ್ರಮೇಣ ಅಧೋಗತಿಗೆ ಇಳಿದು ನಾಶವಾಗುತ್ತಿದ್ದರು. ತಪಸ್ಸಿನ ಪುಣ್ಯದ ಫಲವಾಗಿ ಪಡೆದುಕೊಂಡದ್ದನ್ನು ಪಾಪಾರ್ಜನೆ ಮಾಡಿ ಕಳೆದುಕೊಳ್ಳುತ್ತಿದ್ದರು. ಹೀಗೆ ಶಿಕ್ಷಣವನ್ನು ಸ್ವಂತಕ್ಕಾಗಿ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಹಾಳಾಗುತ್ತಾರೆ. ಶಿಕ್ಷಣ ಬುದ್ಧಿಗಷ್ಟೇ ಅಲ್ಲ ಹೃದಯಕ್ಕೂ. ನಮ್ಮ ಮಗು ಎಷ್ಟು ಅಂಕ ಗಳಿಸಿದೆ ಎಂಬುದು ಮುಖ್ಯವಲ್ಲ, ಅದು ಈ ಜಗತ್ತಿನೊಂದಿಗೆ ಎಷ್ಟರಮಟ್ಟಿಗಿನ ಸಂಬಂಧವನ್ನು ಸ್ಥಾಪಿಸಿಕೊಂಡಿದೆ ಎಂಬುದು ಮುಖ್ಯ. ಮಗಳನ್ನು ರಜೆಯಲ್ಲಿ ಹಳ್ಳಿಗೆ ಕರೆದೊಯ್ದಿದ್ದೆ. ಎದುರಿನ ಕುರಿದೊಡ್ಡಿಯಲ್ಲಿ ಅದೇತಾನೆ ಕುರಿ ಮರಿ ಹಾಕಿತ್ತು. ಮರಿಯನ್ನು ಮುದ್ದಿಸಲು ಮಗಳು ಅಪೇಕ್ಷಿಸಿದಳು. ಮರಿಯನ್ನು ತರಿಸಿದೆ. ಐದಾರು ನಿಮಿಷದ ಬಳಿಕ ಹತ್ತಿರವಿದ್ದ ಹಳ್ಳಿಯ ಬಾಲಕ ಹೇಳಿದ, “ಸ್ವಾಮಿಕುರಿ ಬಡ್ಕತೈತೆ, ಮರಿ ಕೊಡಿ ತಾಯಿ ತಾವ ಬುಡ್ತೀನಿ”. ನಮ್ಮ ಕೃತಕ ಪ್ರೀತಿಯ ಪೂರದಲ್ಲಿ ನಮಗೆ ತಾಯಿಕುರಿಯ ಕರೆ ಕೇಳಿಸಿರಲೇ ಇಲ್ಲ! ಆ ಹುಡುಗ ನನ್ನಂತೆ ವಿದ್ಯಾವಂತನಲ್ಲ ಆದರೆ ಹೃದಯವಂತ.ಪ್ರಯೋಗಾಲಯದಲ್ಲಿ ನೂರಾರು ಕಪ್ಪೆಗಳನ್ನು ಕೊಯ್ದು ಅವುಗಳ ಅಧ್ಯಯನ ಮಾಡುವದಕ್ಕಿಂತ ಮಳೆಗಾಲದ ರಾತ್ರಿಯಲ್ಲಿ ಅವುಗಳ ಸಮೂಹ ಗಾಯನ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಮುದವಿದೆ. ಶೇಕಡವಾರು ಅಂಕಗಳಿಕೆಗಿಂತ ಅರಿವನ್ನು ವಿಸ್ತರಿಸಿಕೊಳ್ಳುವಲ್ಲಿ ಮಹತ್ತಿದೆ.

Sunday, 28 June 2015

ಕಲಿಕೆಯ ಬಂಡವಾಳ

ಕಲಿಕೆಯ ಬಂಡವಾಳ

ಸಂಪಾದಕೀಯವಿವೇಕಹಂಸ ಜೂನ್ ೨೦೧೫


ಇಂದು ಎಲ್ಲವನ್ನೂ ಹಣದ ಹಿನ್ನೆಲೆಯಲ್ಲಿ ವಿವರಿಸಬೇಕಾದಂತಹ ಪರಿಸ್ಥಿತಿ. ಅದರಲ್ಲಿಯೂ ಶಾಲಾ ಕಾಲೇಜುಗಳ ವಾರ್ಷಿಕ ಆರಂಭದ ಮಾಸವಿದು. ಕೊಡು-ಕೊಳ್ಳುವಿಕೆ, ದಲ್ಲಾಳಿ ಇವೆಲ್ಲ ಈ ಕ್ಷೇತ್ರವನ್ನೂ ಬಿಡದೆ ಆವರಿಸಿಕೊಂಡಿದೆ. ತಂದೆ ತಾಯಿಗಳೂ ತಮ್ಮ ಮಕ್ಕಳ ಓದಿಗೆ ನೀಡಿದ ಹಣವನ್ನು ಲೆಕ್ಕಹಾಕುವುದನ್ನು ನೋಡಿದ್ದೇನೆ. ಇದು ಸರಿಯೋ ತಪ್ಪೋ ಎನ್ನುವುದಕ್ಕಿಂತ ಯಾವಮಟ್ಟದಲ್ಲಿ ಇದನ್ನು ಪರಿಗಣಿಸಬೇಕು ಎಂಬುದು ಪ್ರಶ್ನೆ. ಕಡೇಪಕ್ಷ ಎರಡನೇ ಪಿಯುಸಿ ವರೆಗೆ ಶಿಕ್ಷಣಕ್ಕೆ ತೊಡಗಿಸುವ ಹಣ ಕೊಡುಗೆಯಾಗಬೇಕೇ ಹೊರತು ಬಂಡವಾಳವೆಂದು ಪರಿಗಣಿತವಾಗಬಾರದು. ಅಲ್ಲಿಂದಾಚೆಗೆ ಅಂದರೆ ಪದವಿಯ ಮಟ್ಟದ ವೇಳೆಗೆ ವಿದ್ಯಾರ್ಥಿ ತನ್ನೋದಿಗೆ ತಾನೇ ಹಣ ತೊಡಗಿಸುವಂತಾಗಬೇಕು. ಈ ಕೆಚ್ಚು ಪೇಟೆ ಹುಡುಗರಿಗಿಂತ ಹಳ್ಳಿ ಹುಡುಗರಲ್ಲಿ ಹೆಚ್ಚು. ಹಳ್ಳಿಯ ಮಿತ್ರ ಫೋನಿನಲ್ಲಿ ಹೇಳಿದ, “ ಚಿಕ್ಕ ಮಗ ಪಿಯುಸಿ ಪಾಸಾಗುವ ಭರವಸೆ ಹೊಂದಿದ್ದಾನೆ. ಅವನು ಈಗ ರಜೆಯಲ್ಲಿ ಬೆಂಗಳೂರಿಗೆ ಬಂದು ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಗಳಿಕೆಯ ಹಣದಲ್ಲಿ ತನ್ನ ಪದವಿ ಕಾಲೇಜಿನ ಪ್ರವೇಶದ ಫೀ ತುಂಬುವ ಹಠ ತೊಟ್ಟಿದ್ದಾನೆ....ಫಲಿತಾಂಶದ ಹಿಂದಿನ ದಿನ ಊರಿಗೆ ಬರುತ್ತಾನೆ”. ನಗರದ ಎಷ್ಟು ಮಕ್ಕಳು ಈ ಬಗೆಯ ಸವಾಲು ಸ್ವೀಕರಿಸುತ್ತಾರೆ? ರಜೆಯಿರುವುದು ಮಜಾ ಮಾಡಲು ಎಂಬ ಮನೋಭಾವವೇ ಇವರಲ್ಲಿ ಹೆಚ್ಚು. ಇವರಲ್ಲೂ ಕೆಲವರು ದುಡಿದು ಓದುವವರಿದ್ದಾರೆ. ಆದರೆ ಈ ಪ್ರಮಾಣ ಹಳ್ಳಿಯ ಮಕ್ಕಳಲ್ಲಿ ಹೆಚ್ಚು. ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಿದೆವಲ್ಲ, ಅದರಲ್ಲಿ ಗ್ರಾಮೀಣ ಮಕ್ಕಳದೇ ಮೇಲುಗೈ. ಇದಕ್ಕೆ ಕಾರಣ ಅವರಲ್ಲಿ ತಾವು ಮೇಲೆದ್ದು ಬರಬೇಕೆಂಬ ಅಭೀಪ್ಸೆ, ಉದ್ಧಾರವಾಗಬೇಕೆಂಬ ಹಂಬಲ.ವಿದ್ಯಾರ್ಜನೆಯಲ್ಲಿ ತೊಡಗಿಸಬೇಕಾದ್ದು ಹಣವನ್ನಲ್ಲ, ಮನಸ್ಸನ್ನು. ಪದವಿ ಎನ್ನುವುದು ಒಂದು ಅರ್ಹತೆಯೇ ಹೊರತು ಅದು ಉದ್ಯೋಗ ಖಾತರಿಪತ್ರ ಅಲ್ಲ. ಆದುದರಿಂದ ಹಣ ಖರ್ಚು ಮಾಡಿ ಪದವಿ ಓದಿಸಿದರೂ ಮಗ/ಮಗಳು ನಿಷ್ಪ್ರಯೋಜಕರಾಗಿಯೇ ಉಳಿದರೆಂದು ದೂರುವಂತಿಲ್ಲ. ಮೆಕಾಲೆ ಯುಗದಿಂದ ಹೊರಬಂದು ಯೋಚಿಸಿದಾಗ ಈ ಮಾತು ಅರ್ಥವಾಗುತ್ತದೆ. ಇಂದು ಕಾರಕೂನಿಕೆಗೆ ಪದವಿ ಬೇಕಿಲ್ಲ. ಸಂವಹನ ಶಕ್ತಿಯಿದ್ದು ಸ್ವಲ್ಪ ಅಕ್ಷರಜ್ಞಾನವಿದ್ದರೆ ಜೀವನೋಪಾಯಕ್ಕೆ ಒಂದು ಕೆಲಸ ಗಿಟ್ಟಿಸುವುದು ಕಷ್ಟವಲ್ಲ. ಆದರೆ ಹಾಗೆ ಕೆಲಸಕ್ಕೆ ಸೇರಿದ ಮೇಲೆ ಅವರಿಗೆ ವಿದ್ಯೆಯ ಮೌಲ್ಯ ತಿಳಿಯುತ್ತದೆ, ದುಡಿದ ಹಣದಲ್ಲಿ ಫೀಸು ತೆತ್ತು ಸಂಜೆ ಕಾಲೇಜಿಗೆ ಸೇರುತ್ತಾರೆ. ಅಧ್ಯಾಪಕನಾದ ನನ್ನ ಅನುಭವದಿಂದ ಹೇಳುವುದಾದರೆ, ಸಂಜೆ ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಕಲಿಕೆಯ ಹಂಬಲ ಹಗಲು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಂಡುಬರುವುದಿಲ್ಲ. ಅಂದರೆ ಅವರು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಬಹಳ ಅಂತರ ಕಂಡುಬರುತ್ತದೆ. ಹಾಗೆಂದ ಮಾತ್ರಕ್ಕೆ ಹಗಲು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಹಂಬಲ ಇಲ್ಲವೆಂದಲ್ಲ, ಆದರೆ ಅದರ ಪ್ರಮಾಣ ಕಡಿಮೆ. ವಿದ್ಯೆಯೆಂಬುದು ದೀರ್ಘಕಾಲದ ತೊಡಗಿಸಿಕೊಳ್ಳುವಿಕೆ. ಒಂದನೆ ತರಗತಿಯಿಂದ ಪದವಿಯವರೆಗಿನ ನಮ್ಮ ಆಸಕ್ತಿಯನ್ನು ಅಲ್ಲಿ ಬಿತ್ತಿ ಬೆಳೆಯಬೇಕು. ಎಲ್ಲ ಬಂಡವಾಳ ಹೂಡುವಿಕೆಗೂ ಇರುವ ಒಂದು ಸಾಮಾನ್ಯಸೂತ್ರವೆಂದರೆ, ಹೂಡುವಿಕೆ ದೀರ್ಘಕಾಲದ್ದಾಗಿರಬೇಕು ಎಂಬುದು. ಪಕ್ವಗೊಳ್ಳುವ ಮುನ್ನವೇ ಬಂಡವಾಳವನ್ನು ಹಿಂತೆಗೆದುಕೊಂಡರೆ ಲಾಭವೂ ಖೋತ! ವಿದ್ಯೆಯು ಅಂತಹ ಒಂದು ಹೂಡಿಕೆ. ಇಲ್ಲಿ ತಾಳ್ಮೆ ಬಹು ಮುಖ್ಯ. ಇದನ್ನು ವಿದ್ಯಾರ್ಥಿಗಳೂ ಪೋಷಕರೂ ಅರಿತುಕೊಂಡರೆ ಕಲಿಕೆ ಮತ್ತಷ್ಟು ಸರಾಗ.

Wednesday, 10 June 2015

Yogamorons!

Yogamorons!

Morons who detest yoga in the name of religion or for the reason that it being not `secular' do not understand that yoga is pure science. I wish they visit NIMHANS once and see how the mentally challenged are drawing benfits out of yoga. Serious disorders too when treated with yoga get amazing results. It is not just chanting a mantra or bending a body, it is a science of balancing vital elements of human mind-body.

For example, depression, a common suffering in the modern world sometimes turns chronic and one of the treatments administered to severe depression is ECT(Electro Convulsive Therapy), experience of which a normal humanbeing can never ever imagine. A mild electric current is passed through the brain by placing electrodes strategically to stimulate frontal lobe of the brain. It is done under general anaesthesia, leaves the patient in a dazed condition for sometime and headache a common side effect. However most of the patients recover from chronic depression after ECT; but recovery is temporary! Medication, counselling, follow ups are a must even after ECT. Yoga has an anwer to this. BRAMARI PRANYAM is a natural stimulator of frontal lobes of brain. Few relaxing asanas, Naadishudhi pranayam, bramarai pranayam and sheethali pranayam helps these depression patients. And I have seen patients from all religions and all walks of life simply following the instructions of the yoga research centre at NIMHANS. Morons who desist yoga can get their brains baked by electric current, but sensible humanbeings irrespective of any religion they follow at home, will practice yoga to keep themselves healthy.

Hats off to Dr. Gangadhar and his team for the patience and persistence which keeps the special yoga research centre running in the campus. Even ordinary, normal humanbeings have natural(political, idiotic, religious) resistance to learn yoga but here the instructors work hard with the patients who have mental disorders!

I salute all the yoga teachers around the world. They are shaping beautiful minds! :-)

Monday, 1 June 2015

ರನ್‌ವೇ

ಸಂಪಾದಕೀಯ ಮೇ ೨೦೧೨

ರನ್‌ವೇ

ವಿಮಾನ ನಿಲ್ದಾಣಗಳನ್ನು ಕಂಡವರು, ಅದರ ಬಗ್ಗೆ ತಿಳಿದವರು ಬಲ್ಲರು ರನ್‌ವೇ ಎಂದರೆ ಏನು ಎಂಬುದನ್ನು. ಟನ್ ಗಟ್ಟಲೆ ತೂಗುವ ವಿಮಾನವೊಂದು ನೆಲ ಬಿಟ್ಟೇಳಲು ರನ್‌ವೇ ಬಳಸುತ್ತದೆ. ನಿಲ್ದಾಣದಿಂದ ನಿರ್ದಿಷ್ಟ ರನ್‌ವೇಗೆ ಮೆಲ್ಲನೆ ಸಾಗಿ ಅಲ್ಲಿ ಇಂಜಿನ್‌ಗಳ ಪೂರ್ಣ ಸಾಮರ್ಥ್ಯ ಬಳಸಿ ವೇಗವನ್ನು ಪಡೆದುಕೊಂಡು ನೆಲ ಬಿಟ್ಟೇಳುತ್ತದೆ. ಹೀಗೆ ಉಡ್ಡಯನಕ್ಕೆ ಬೇಕಾದ ವೇಗ ಗಳಿಸಿಕೊಳ್ಳಲು ರನ್‌ವೇ ಬಳಸಿಕೊಳ್ಳುತ್ತದೆ ವಿಮಾನ. ಈ ಸೂತ್ರವನ್ನು ಬದುಕಿಗೂ ಬಳಸಿಕೊಳ್ಳಬೇಕು ಎಂಬುದನ್ನು ಸೂಚಿಸುವುದೇ ಈ ಸಂಪಾದಕೀಯದ ಆಶಯ. ಬದುಕಿನಲ್ಲಿಯೂ ಟೇಕ್ ಆಫ್ ಆಗದವರು ಎಷ್ಟೋ ಮಂದಿ ಇದ್ದೇವೆ. ವಿಮಾನದಲ್ಲಿ ಕುಳಿತು ವಿಮಾನ ನಿಲ್ದಾಣದಲ್ಲಿಯೇ, ನೆಲದ ಮೇಲೆಯೇ ಸುತ್ತುಹೊಡೆದಂತೆ ಇರುವವರ ಬದುಕೂ ಇದೆ. ವೇಗ ಸಾಧಿಸಿ ಗಗನದಲ್ಲಿ ಹಾರಾಡುವ, ಆಕಾಶ ವಿಹಾರ ನಡೆಸುವ ಧೈರ್ಯವಿಲ್ಲದವರು ಇವರು. ಬದುಕಿನಲ್ಲಿ ರಿಸ್ಕ್‌ಗೆ ಹೆದರುವವರು ಎತ್ತರಕ್ಕೆ ಏರಲಾರರು.

ವಿಮಾನ ನೆಲ ಬಿಟ್ಟೇಳುವಾಗ, ಹಾರಾಟ ಮುಗಿಸಿ ಭೂಸ್ಪರ್ಶ ಮಾಡುವಾಗ ವಿಮಾನದಲ್ಲಿ ಕುಳಿತವರಿಗೆ ಒಂದು ಬಗೆಯ ಹೊಟ್ಟೆ ಕಲಕಿದ ಅನುಭವವಾಗುತ್ತದೆ. ಇದು ಸ್ಥಿರ-ಅಸ್ಥಿರ ಸ್ಥಿತಿಗಳ ನಡುವಣ ಸಂಧಿಕಾಲ. ಭೂಮಿಯ ಮೇಲಿದ್ದ ಒಡಲು ಆಕಾಶದಲ್ಲಿ ಹಾರುವ ಸ್ಥಿತಿಗೆ ತಲುಪುವ ಮೊದಲು ಒಂದು ಕ್ಷಣದ ಆತಂಕವನ್ನು ಅನುಭವಿಸುತ್ತದೆ. ಹಾಗೇ ತಲುಪುವಾಗಲೂ ಎತ್ತರದ ಮುಕ್ತ ಹಾರಾಟದಿಂದ ಭೂಮಿಗೆ ಕಾಲಿರಿಸುವ ಘಳಿಗೆಯಲ್ಲಿ ಹೃದಯ ಡವಗುಟ್ಟುತ್ತದೆ, ಹೊಟ್ಟೆ ಮಗಚುತ್ತದೆ. ಇವಾವ ಅನುಭವವೂ ಬೇಡವೆಂದರೆ ಸುಮ್ಮನೆ ಭೂಮಿಯ ಮೇಲೆ ಓಡಾಡಿಕೊಂಡಿರಬಹುದು. ಹಾರುವ ಸುಖ ಬೇಕೆಂದರೆ ಏರುವ ಕಷ್ಟ, ಮುಜುಗರ ಅನುಭವಿಸಲೇಬೇಕು. ಬೀಳುವ ಭಯ ಬಿಟ್ಟ ಹೊರತು ಸೈಕಲ್ ಕಲಿಯುವುದಿಲ್ಲ. ಅಂತಹುದರಲ್ಲಿ ಹಾರಲು ಮತ್ತಷ್ಟು ಧೈರ್ಯ ಬೇಕೇಬೇಕು.


ಲೌಕಿಕ ಜೀವನವಾಗಲಿ ಆಧ್ಯಾತ್ಮಿಕ ಜೀವನವಾಗಲಿ ರನ್‌ವೇ ತಲುಪಲೇಬೇಕು. ಬದುಕಿನೆತ್ತರದ ಗುರಿಗೆ ತಕ್ಕಂತೆ, ಆಶಯಕ್ಕೆ ತಕ್ಕಂತೆ ರನ್‌ವೇ ರೂಪಿಸಿಕೊಳ್ಳಬೇಕು. ಇವುಗಳ ತಾಳಮೇಳ, ಅಂದರೆ ವಿಮಾನದ ತೂಕ, ಏರಬೇಕಾದ ಎತ್ತರ, ರನ್‌ವೇಯ ಉದ್ದ, ಗಳಿಸಬೇಕಾದ ವೇಗ ಇವೆಲ್ಲ ಹೊಂದಿಕೆಯಾಗದಿದ್ದರೆ ವಿಮಾನ ಕುಸಿಯುತ್ತದೆ. ಜೀವನದ ಗುರಿಗೆ ತಕ್ಕ ದೇಹ ಸಾಮರ್ಥ್ಯ, ಅಂತಃಶಕ್ತಿ, ಸಾಧನೆಯ ಛಲ ಇರದಿದ್ದರೆ ಬದುಕು ಯಶಸ್ವಿಯಾಗುವುದಿಲ್ಲ. ವಿಷಾದದ ಛಾಯೆಯೊಂದಿಗೆ ಜೀವನಕ್ಕೆ ವಿದಾಯ ಹೇಳಬೇಕಾಗುತ್ತದೆ. ಉತ್ತಮ ಪದವಿ, ಸ್ಥಾನಮಾನ ಗಳಿಸಬೇಕಾದ ವಿಧ್ಯಾರ್ಥಿ ಕನಿಷ್ಠ ದಿನವೊಂದಕ್ಕೆ ಮೂರು ತಾಸು ಅಧ್ಯಯನ ಮಾಡಬೇಕು ಎನ್ನುತ್ತಾರೆ. ಆದರೆ ಯಶಸ್ವೀ ಅಭ್ಯರ್ಥಿಯನ್ನು ಕೇಳಿ ನೋಡಿ, ಅವನು ಪ್ರತಿದಿನ ಅದರ ಎರಡುಪಟ್ಟು, ಮೂರುಪಟ್ಟು ಶ್ರಮಿಸಿರುತ್ತಾನೆ. ಕನಿಷ್ಠವನ್ನೇ ಗರಿಷ್ಠ ಮಿತಿಯಾಗಿಸಿಕೊಂಡವರ ಬದುಕು ಮಿತಿಯೊಳಗೇ ನಿಂತುಬಿಡುತ್ತದೆ, ಅಪರಿಮಿತವನ್ನು ಸಾಧಿಸುವುದೇ ಇಲ್ಲ. ಮಂತ್ರಜಪ ಮಾಡುವ ಆರಂಭದಲ್ಲಿ ದಿನಕ್ಕೆ ೧೦೮ ಆದರೂ ಮಾಡಬೇಕು ಎಂಬ ನಿರ್ದೇಶನವಿರುತ್ತದೆ. ದೀಕ್ಷೆ ಪಡೆದು ಹತ್ತು ವರ್ಷವಾದರೂ ಅಷ್ಟೇ ಸಂಖ್ಯೆಯ ಜಪ ಮಾಡುತ್ತಿದ್ದರೆ ಈ ಆಧ್ಯಾತ್ಮಿಕ ಗುರಿಯು ವಿಮಾನ ನಿಲ್ದಾಣದಲ್ಲಿಯೇ, ನೆಲದ ಮೇಲೆಯೇ ಹರಿದಾಡುತ್ತಿದೆ ಎಂದರ್ಥ. ಎಷ್ಟೋ ಮಂದಿಯ ಬಳಿ ಅದ್ಭುತ ಯೋಜನೆಗಳಿರುತ್ತದೆ. ಅವು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಬಾಯಿಮಾತಿನಲ್ಲೇ ಆವಿಯಾಗಿಹೋಗುವ ಯೋಜನೆಗಳಿಗಿಂತ ಅಲ್ಪಪ್ರಮಾಣದ ಆಚರಣೆ, ಅನುಷ್ಠಾನಗಳೇ ಉತ್ತಮ. ಮಂತ್ರದೀಕ್ಷೆ ಪಡೆದವರಿಗೆಲ್ಲ ಮುಕ್ತರಾಗುವ ಆಸೆಯಿದೆ. ಆದರೆ ಈ ಜನ್ಮದಲ್ಲೇ ಈಗಿಂದೀಗಲೇ ಮುಕ್ತಿಪಡೆಯುವ ಹಂಬಲ ಯಾರಿಗಿದೆ? ಹೀಗೆ ಮುಕ್ತರಾಗಿಬಿಟ್ಟರೆ ನಮ್ಮನ್ನು ನಂಬಿದವರ ಗತಿ ಏನು ಎಂಬ ಆತಂಕ! ಈ ಆತಂಕದಲ್ಲಿ ಸಾಧನೆ ಸುಮ್ಮನೆ ಯಾಂತ್ರಿಕ ಆಚರಣೆಯಾಗಿ ಈ ಆಧ್ಯಾತ್ಮಿಕ ವಿಮಾನ ಮ್ಯೂಸಿಯಮ್ಮಿನ ಮಾದರಿ ವಿಮಾನವಾಗಿಬಿಡುತ್ತದೆ. ವಿಮಾನವಿರುವುದು ಹಾರುವಿಕೆಗೇ ಹೊರತು ತೋರುವಿಕೆಗಲ್ಲ. ಬದುಕು ಇರುವುದು ಆತ್ಮದ ಅನಂತಶಕ್ತಿಯ ಹೊಮ್ಮುವಿಕೆಗೇ ಹೊರತು ಕೇವಲ ಜೀವಿಸುವಿಕೆಗಲ್ಲ. ಈಗ ನಾವು ಅಂತರೀಕ್ಷಣೆ ಮಾಡಿಕೊಳೋಣ - ನಮ್ಮ ಜೀವನ ವಿಮಾನ ಎಲ್ಲಿದೆ? ನಿಲ್ದಾಣದಲ್ಲೋ, ರನ್ ವೇಯಲ್ಲೋ, ಆಕಾಶದಲ್ಲೋ?!  

Saturday, 30 May 2015

ಆಧುನಿಕ ಹರಿಶ್ಚಂದ್ರರು; ಸಂಪಾದಕೀಯ ಮಾರ್ಚ್ 2014


ಆಧುನಿಕ ಹರಿಶ್ಚಂದ್ರರು

ಮನೆಯಿಂದ ಕಾಲೇಜಿಗೆ ಹೋಗುವ ದಾರಿಯಲ್ಲಿ ಮುಂಜಾನೆ ಗಮನಿಸುತ್ತೇನೆ. ಬಸ್ ನಿಲ್ದಾಣದ ಚೌಕದಲ್ಲಿ ನಾಲ್ಕು ರಸ್ತೆ ಕೂಡುವೆಡೆಯಲ್ಲಿ ನಾಲ್ಕೂ ದಿಕ್ಕಿನ ಫುಟ್‌ಪಾತ್‌ಗಳ ಮೇಲೆ ಬುತ್ತಿಗಂಟು ಹಿಡಿದ ಜನರ ದಂಡು. ಗಂಡು-ಹೆಣ್ಣಾಳುಗಳು ಅಂದಿನ ದಿನಗೂಲಿಗೆ ಕಾದು ನಿಂತಿರುತ್ತಾರೆ. ಬಳಿಕ ಮೇಸ್ತ್ರಿಗಳ ಆಗಮನ, ಮೋಟಾರ್‌ಬೈಕ್‌ಗಳಲ್ಲಿ. ಜಾತ್ರೆಯಲ್ಲಿ ಕುರಿಗಳನ್ನು ಅಳೆವಂತೆ ಕಣ್ಣೋಟದಲ್ಲಿ ಈ ಜನರ ದಂಡನ್ನಳೆದು ಕೆಲವರನ್ನು ಆಯ್ಕೆ ಮಾಡಿ ತಾವು ತಂದ ಟೆಂಪೊ ಇತ್ಯಾದಿ ದೊಡ್ಡ ವಾಹನದಲ್ಲಿ ತುಂಬಿಕೊಂಡು ಕೆಲಸ ನಡೆಯಬೇಕಾದ ಸ್ಥಳಗಳಿಗೆ ಇವರನ್ನು ರವಾನಿಸಿಬಿಡುತ್ತಾರೆ. ಇದಿಷ್ಟೂ ವ್ಯವಹಾರ ನಗರದ ನಮ್ಮಂತಹ ಸಾಹೇಬರು ಆಫೀಸಿಗೆ ಹೊರಡುವ ಮುನ್ನ ನಡೆದುಹೋಗುತ್ತದೆ; ಅಂದರೆ ಬೆಳಗಿನ ೭.೩೦ರಿಂದ ೯ರೊಳಗಿನ ಅವಧಿಯಲ್ಲಿ ಮುಗಿದುಹೋಗುತ್ತದೆ. ಯಾವುದೇ ಉದ್ಯೋಗ ಭದ್ರತೆಯಿಲ್ಲದ, ಭರವಸೆಯಿಲ್ಲದ; ನಿತ್ಯ ತಮ್ಮನ್ನು ತಾವು ಮಾರುಕಟ್ಟೆಯ ಚೌಕದಲ್ಲಿ ಮಾರಿಕೊಳ್ಳುವ ಆಧುನಿಕ ಹರಿಶ್ಚಂದ್ರರು ಇವರು. ಇವರಿಗೆ ಯಾವ ಬಜೆಟ್ ಅನ್ವಯವಾಗುತ್ತದೆ ಎಂದು ಚಿಂತಿಸುತ್ತೇನೆ.
ಭಾರತದಲ್ಲಿ ಇಂತಹ ಅಸಂಘಟಿತ ಶ್ರಮಿಕವರ್ಗ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ವಿಫಲವಾಗುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇವರು ಶೋಷಣೆಗೆ ಒಳಗಾಗುತ್ತಾರೆ. ಗಾರೆ ಸಿಮೆಂಟುಗಳ ಒಡನಾಟದಲ್ಲಿ ಬೆಳೆವ ಇಂತಹವರ ಮಕ್ಕಳು ಅದೆಷ್ಟು ಬಾರಿ ಸಂಪಿನ ತಳ ಕಂಡಿಲ್ಲ? ಲಾರಿಯ ಚಕ್ರಕ್ಕೆ ಬಲಿಯಾಗಿಲ್ಲ? ಕಟ್ಟಡಕಾರ್ಯ ನಡೆಯುವ ಸಮೀಪವೇ ಮರದ ಜೋಲಿಯಲ್ಲಿ ಮಲಗಿರುವ ಹಸುಗೂಸುಗಳನ್ನು ಕಂಡಾಗೆಲ್ಲ ಕರುಳು ಚುರುಗುಟ್ಟುತ್ತದೆ. ಈ ಕೂಸು ಕಾಣುವ ಕನಸು ನಮ್ಮ ಕೂಸಿನ ಕನಸಿಗಿಂತ ಹೇಗೆ ಭಿನ್ನ? ಶಿಕ್ಷಣದ ಹಕ್ಕು ಇರಲಿ ಶೈಶವದ ಹಕ್ಕೂ ಇವುಗಳಿಗೆ ಲಭ್ಯವಿಲ್ಲ. ನೂರಾರು ಮನೆಕಟ್ಟಿದರೂ ಇವರು ನೆಲೆಸುವುದು ತಮ್ಮ ಜೋಪಡಿಗಳಲ್ಲೇ. ಶ್ರಮಿಕ ವರ್ಗವೆಂದರೆ ಶೋಷಿತವರ್ಗವಾಗಬೇಕಿಲ್ಲ. ಎಲ್ಲರಂತೆ ಬದುಕುವ ಹಕ್ಕು, ಬೆಳೆಯುವ ಅವಕಾಶ ಇಂತಹವರಿಗೆ ದೊರೆಯುವಂತೆ ಮಾಡದ ಹೊರತು ಈ ಜನ ಹೀಗೇ ಇರುತ್ತಾರೆ. ಎಲ್ಲಿಯವರೆಗೆ ಇವರು ಹೀಗಿರುತ್ತಾರೋ ಅಲ್ಲಿಯವರೆಗೆ ಭಾರತ ‘ಮುಂದುವರಿಯುತ್ತಿರುವ’ ದೇಶವೆಂದೇ ಪರಿಗಣಿಸಲ್ಪಡುತ್ತದೆ.
ವಿದ್ಯಾವಂತರೂ ಪ್ರಗತಿಹೊಂದಿದವರೂ ಕೂಡ ಮಾರಿಕೊಂಡಿದ್ದೇವೆ; ನಮ್ಮಗಳ ಆತ್ಮಸಾಕ್ಷಿಯನ್ನು. ನಾವೂ ಹರಿಶ್ಚಂದ್ರರೇ. ಮಾರುಕಟ್ಟೆಯಲ್ಲಿ ಸ್ವಾರ್ಥಸಾಧನೆಯ ಲೋಭಕ್ಕೆ ಒಳಗಾಗಿ ನಮ್ಮ ಮೌಲ್ಯಗಳನ್ನು ಮರೆತಿದ್ದೇವೆ. ನಕ್ಷತ್ರಿಕನನ್ನು ಕಡೆಗಣಿಸಿ ದಿಕ್ಕುತಪ್ಪಿದ್ದೇವೆ. ಕ್ಷಣಿಕ ತೃಪ್ತಿಗಾಗಿ ಮನಗಳನ್ನು ಮಾರಿಕೊಂಡಿದ್ದೇವೆ. ಹೀಗಾಗಿ ಭ್ರಷ್ಟಾಚಾರ, ಲಂಚಕೋರತನ ಸಹಜವೆನಿಸಿಹೋಗಿವೆ. ಆದರೆ ಪರಿಸ್ಥಿತಿ ಹೀಗೇ ಮುಂದುವರಿಯಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರ ಮಾತುಗಳೇ ತಿಳಿಸುವಂತೆ ಮೇಲ್ವರ್ಗವು ಪ್ರೀತಿಯಿಂದ ಕೊಡದಿದ್ದರೆ ಬಲವಂತದಿಂದ ಅವರಿಂದ ಕಿತ್ತುಕೊಳ್ಳಲಾಗುವುದು. ಇದು ಪ್ರಕೃತಿನಿಯಮವೂ ಹೌದು, ಸಾಮಾಜಿಕ ನಿಯಮವೂ ಹೌದು. ಹಮ್ಮುಬಿಮ್ಮು ಮರೆತು ವಿನಯ ಸೌಜನ್ಯಗಳಿಂದ ಎಲ್ಲರ ಹಿತಚಿಂತನೆ ಮಾಡುವುದು ಇಂದಿನ ಆವಶ್ಯಕತೆ. ಶ್ರೀರಾಮಕೃಷ್ಣರ ಬದುಕನ್ನು ಮತ್ತೊಮ್ಮೆ ಓದಬೇಕು, ಮಾನವೀಯ ಮೌಲ್ಯವಿವೇಚನೆಯ ಹಿನ್ನೆಲೆಯಲ್ಲಿ. ಅವರ ದೈವತ್ವ ನಮಗೆಟಕುವುದು ಕಷ್ಟವಾದರೂ ಅವರ ಬದುಕಿನಲ್ಲಿ ಕಂಡುಬರುವ ಮಾನವಪ್ರೇಮ, ಕಾಳಜಿ, ಮನುಷ್ಯರ ಬಗೆಗಿನ ಷರತ್ತುರಹಿತಪ್ರೀತಿ ಇವುಗಳನ್ನು ಅಭ್ಯಸಿಸಬೇಕು. ಸತ್ಯದ ಬದುಕು ಮಾತಿನದಲ್ಲ ಕೃತಿಯದು. ಇಂತಹ ಬದುಕಿನಿಂದ ಮಾತ್ರ ಕೃತಕೃತ್ಯತೆ ಸಾಧ್ಯ. ಬದುಕಿಗಾಗಿ ಮೌಲ್ಯ ಮಾರುವ ಹರಿಶ್ಚಂದ್ರರಾಗದೆ ಮೌಲ್ಯಕ್ಕಾಗಿ ಬದುಕನ್ನು ಪಣವಿಡುವ ಹರಿಶ್ಚಂದ್ರರಾಗೋಣ.

Monday, 9 February 2015

ವಿವಾಹ ಮಂಗಳ

ವಿವಾಹ ಮಂಗಳ


ನಿತ್ಯ ವರಪರೀಕ್ಷೆಯಲಿ
ವರನಿಗೇ ಸೋಲು
“ನೀವು ತಂದ ಹಾಲು
ಹೆಪ್ಪಿಟ್ಟರೂ ಮೊಸರಾಗದು
ತರಕಾರಿಯೋ..ಅಯ್ಯೋ
ಬಲಿತ ಹುರುಳಿ, ಬೆಂಡು ಸವತೆ
ಕನರು ಬದನೆ, ಕಹಿ ಹೀರೆ.
ಕೊಳೆತ ಕಿತ್ತಳೆ, ದ್ರಾಕ್ಷಿ ಹುಳಿ.
ಸೀರೆ?
ಒಂದಕ್ಕೆರಡು ಕೊಟ್ಟಿರಲ್ಲ!
ಬಣ್ಣ ಪಸಂದಿಲ್ಲ
ಇದು ಹಾಗೇ ಇಡಿ
ಕೊಟ್ಟರಾಯಿತು ಯಾರಿಗಾದರೂ
ಉಡುಗೊರೆಯಾಗಿ.
ಹೂವು ಮಾರಿಲ್ಲ
ಮಾರುವವಳ ಮಾರೆ
ನೋಡಿ ತಂದಿರೇನು?
ಬಾಡಲೆರಡೇ ಘಳಿಗೆ
ಮಲ್ಲಿಗೆ, ಮೊಗ.”


ಪರೀಕ್ಷೆಯೇ ಇಲ್ಲದ
ವಧುವಿಗೇ ನಿತ್ಯ ಜಯ.
ಇವಳು ಬೆರೆಸಿದ ಕಾಫಿಗೆ
ಮಯ್ಯನೂ ಕೈಚೆಲ್ಲಬೇಕು
ಉಪ್ಪಿಟ್ಟಿನ ಘಮಲಿಗೆ
ಎಂಟಿಆರ್ ಮುಲುಗಬೇಕು.
ಮಕ್ಕಳಿಗೆಲ್ಲ ಇವಳ
ಕಾವಲಿಯೇ ವಿದ್ಯಾರ್ಥಿಭವನ
ಇವಳು ತಂದ ಬೆಂಡೆ
ಪರ್ಫೆಕ್ಟ್ ಲೇಡೀಸ್ ಫಿಂಗರ್.
ಸೀರೆ?
ಇವಳು ತಂದದ್ದೂ ಒಂದಕ್ಕೆರಡೇ
ಒಂದಕ್ಕೆ ಮತ್ತೊಂದು ಫ್ರೀ!
ಇರಲಿ ಎರಡೂ ಇವಳಿಗೆ
ಒಂದು ರಾಮ ಗ್ರೀನ್
ಇನ್ನೊಂದು ಪ್ಯಾರೆಟ್ ಗ್ರೀನ್
ಹೂವು, ಕೊಸರು ಸೇರಿ
ದೇವರಿಗೆ ಮುಡಿಸಿ
ಇವಳಿಗೂ ಮಿಗುವಷ್ಟು.


ವಿವಾಹ ಮಂಟಪದ
ಗದ್ದಲವಡಗಿದ ಬಳಿಕವಷ್ಟೆ
ಲಜ್ಜೆಯಾರಂಭ ಸಜ್ಜೆಮನೆಯಲಿ
ನಿತ್ಯವಸಂತದ ತಲ್ಪದಲಿ
ಬೆದೆಯ ನವಿಲಿನ ಕೇಕೆ
ಎಲ್ಲ ತರದೂದುಗಳಿಗೆ
ತುಟಿಮೀರಿದ ಮೌನಬೆಸುಗೆ
ಬೆದಕಾಟದುಸಿರುಗಳ
ತಾಳ ಲಯ ನಾಟ್ಯಕ್ಕೆ
ಸೃಜನತೆಯ ಸಾಕ್ಷಿ.
ಕಾಣದ ಅರುಂಧತಿಯ
ತೋರಿದವಗೆ
ರತಿಯ ಉನ್ಮಾದದ
ಕನವರಿಕೆ
ಬೆಳಗಿನ ಕಹಳೆಯಲಿ
ಜೀವದಾಕಳಿಕೆ
ದಾಟುವಲ್ಲೆಲ್ಲ ಎಚ್ಚರಿಕೆ
ನಾತಿ ಚರಾಮಿ.


Saturday, 31 January 2015

ಕಾಪಿ ಹೊಡೆದುಬಿಡಬೇಕಿತ್ತು ಮೋಹನ........

ಕಾಪಿ ಹೊಡೆದುಬಿಡಬೇಕಿತ್ತು ಮೋಹನ
ನೀನಂದು ಪದಗೆಡಿಸಿದ ‘ಕೆಟ್ಟಲ್’
ಇಂದು ಹದಗೆಡಿಸಿದೆ ದೇಶವನು
ಎಲ್ಲ ಚಹಪಾತ್ರೆಗಳಿಂದು
ಉಳಿದ ಪಾತ್ರೆಗಳು ಮಸಿಯೆನ್ನುತ್ತಿವೆ
ನೀನಂದು ಅನುಸರಿಸಲಿಲ್ಲ
ಮಾಸ್ತರರ ಕಣ್ಸನ್ನೆಯನು
ಕಣ್ಣಮುಚ್ಚಿದೆ
ದಗಾಕೋರರ ನಡೆಗಳಿಗೆ
ಅಂದಿನ ನಿನ್ನ ಮುಗ್ಧ ನಕಲು
ಉಳಿಸಬಹುದಿತ್ತು ದೇಶವನ್ನು
ಇಂದಿನ ಡಾಂಭಿಕತನದಿಂದ
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

ಒಂದು ಸಣ್ಣ ಸುಳ್ಳು
ಸಹಿಸಲಾರೆ ನೀನು ಬಾಪು
ನೀನೇ ಬಿತ್ತಿದ ತತ್ತ್ವಗಳ ಹೆಸರಿನಲಿ
ಮಾರಾಟಕ್ಕಿದೆ ದೇಶ
ಸತ್ಯ ಮತ್ತು ಅಹಿಂಸೆ
ಸಿಂಹದ ಮಿಯಾಂವ್ ಒಂದೆಡೆ
ಮತ್ತೊಂದೆಡೆ ನಿನ್ನ ಚಿತ್ರ
ಮಧ್ಯದಲಿ ಹಾಯುವ
ಬೆಳ್ಳಿಯ ರೇಖೆ
“ ಇವರಿಗೆ ನಾನು ಈ
ಮೊತ್ತವನ್ನು ನೀಡುತ್ತಿದ್ದೇನೆ ”
ನಿತ್ಯ ಏರಿಳಿಯುವ ಮೊತ್ತ
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

ಪದದೊಳಗಿನ ‘ಟಿ’ ಒಂದಕ್ಷರ
ಅಷ್ಟೊಂದು ಮುಖ್ಯವಾಯಿತೆ
ನಿನಗೆ ಬಾಪು?
ನಿನ್ನ ಟೋಪಿ ಧರಿಸಿದ
ಜನರಿಂದ ಇಂದು ಚಣದಲ್ಲಿ
ನೀನೊಂದು ಟೀ
ಕುಡಿಯುವುದರೊಳಗೆ
ದಾಖಲೆಗಳ ಏರುಪೇರು
ನೀನದನು ಬರೆದು
ಅನುಭವಿಸಬಹುದಾಗಿದ್ದ
ಪಾಪಪ್ರಜ್ಞೆಗಿಂತ ಬಲುಭಾರ
ನೀನು ಕಳೆದ ಒಂದು ‘ಟಿ’ ಯ ಬೆಲೆ
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

ಬ್ರಹ್ಮಚರ್ಯೆಯ ವ್ರತದ ಒರೆಗಲ್ಲೆಂದು
ಅವರೊಂದಿಗೆ ಬೆತ್ತಲೆ ಮಲಗಿದೆಯಲ್ಲವೆ
ಫಕೀರ?
ಆಯಿತೆ ನಿನ್ನುದ್ರೇಕದ ಪರೀಕ್ಷೆ?
ಭಳಿರೇ ಭಾಪು!
ನೀನು ಪಾಸಾದೆಯಾ ಮಹಾತ್ಮ?
ನಿನ್ನನೇಕೆ ಕೇಳಲಿ?
ಕೇಳಬೇಕು ಆ ಕಿಶೋರಿಯರನ್ನು
ಬಾಪು, ಇದನ್ನೇ
ಪತ್ನಿಯರು ಮಾಡಿದರೆ
ನೀನದನ್ನು ಪುರಸ್ಕರಿಸುವೆಯಾ?
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

ಸ್ವದೇಶಿ, ಬಾಪು?
ಆದರೆ ನಿನ್ನ ರೂಪುಳ್ಳವನ್ನು
ಕಂತೆಕಟ್ಟಿ ಸ್ವಿಸ್ ಬ್ಯಾಂಕ್ ಗಳಲ್ಲಿ
ಜಮಾಯಿಸಿದ್ದಾರೆ
ಪಾಕಿಸ್ತಾನ ಹೊಲಿಯುತ್ತಿದೆ
ಚರ್ಮಚೀಲಗಳನ್ನು
ಚೀಣವೋ ಬಹಳ ಅಲ್ಪ
ನಾಯಕರು ವಿಹರಿಸುವರು
ವಿಹಾರಧಾಮಗಳಲಿ
ನಾಗರಿಕರು ಬೇಯುವರು
ಬಿಸಿಲ ಬೇಗೆಯಲಿ
ನಮಗಾಗಿ ಬೆತ್ತಲಾದೆ ನೀನು
ಅವರಿಗಾಗಿ ಬೆತ್ತಲಾಗಿಸುತ್ತಿದ್ದಾರೆ
ನಮ್ಮನು
ಕಾಪಿ ಹೊಡೆದುಬಿಡಬೇಕಿತ್ತು
ಗಾಂಧಿ ನೀನು
ಭೂತದ ಪಾಪಪ್ರಜ್ಞೆಯಿಂದ
ಬಿಡುಗಡೆ ಪಡೆಯಲು
ಅಲ್ಲ......
ಭವಿಷ್ಯದ ಹಿತದೃಷ್ಟಿಯಿಂದ
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

Friday, 30 January 2015

You should have copied .....



You should have
copied Mohan
The kettle misspelled
has blackened India
All the kettles now
call the teapots black
The eye of the teacher
you never followed
Closed your eyes
before the cheaters
An innocent malpractice
that day
Could have saved
hypocrisy today
You should have
copied Gandhi......

A small lie
you never buy
But....Bapu, we sell
The nation on the
principles you sowed
Truth and nonviolence
Purring lion on
one side and
Your head on the other
A silver thread in between
"I promise to pay
the bearer" a value
that fluctuates everyday!
You should have
copied Gandhi......

A 't' in the kettle
did that matter
so much Bapu?
that today donning
your cap they tamper
records with ease
before one sips his tea
The cost of the 't'
you missed is
heavier than the
guilt if you had
You should have
copied Gandhi......

Testing Brahmacharya
sleeping naked with
them, you tested your libido
Bravo Gandhi!
Now they do it in style
you woke up with smile
but now, they draw tears
Did you pass Mahatma?
Why ask you?
We should ask those girls
Bapu, would you 
appreciate a wife
if she did the same?
You should have
copied Gandhi......

Swadeshi Bapu?
But your images
are bundled and locked
In Swedish Banks
Pakistan sews
our leather balls
and China is cheap
Netas enjoy the snow
and we bake in sun
You went naked for us
they disrobe us for them
You should have
copied Gandhi
to release yourselves
from the guilt of
not the past
but for the future
You should have
copied Gandhi......

Friday, 16 January 2015

ಎಳ್ಳು ತಂದಿದ್ದೇನೆ ಬೀರಲು.....

ಎಳ್ಳು ತಂದಿದ್ದೇನೆ ಬೀರಲು
ಜೊತೆಗೆ ಮೂವತ್ತೆರಡು ಹಲ್ಲು
ಸೆನ್ಸೊಡೈನ್ ಸೆಲ್ಫೀ ನಗು.

ಯಾವುದೋ ಎಲಚಿ
ತಳ್ಳುಗಾಡಿಯಲ್ಲಿ ಕೊಂಡಿದ್ದೇನೆ
ಮರವೇರದೆ ತರಚು ಗಾಯವಿಲ್ಲದೆ
ತಂದಿದ್ದೇನೆ ಎಲಚಿ ತಗೊಳ್ಳಿ
ಎಳ್ಳು ತಂದಿದ್ದೇನೆ ಬೀರಲು......

ನಾನು ಬೆಳೆಯದ ಕಡಲೆ
ಹದವಾಗಿ ಹುರಿದ ಶೇಂಗಾ
ಅರೆಜೀವದ ಕಿತ್ತಳೆ
ಬೆಡಗಿನ ನಗೆ ಇಗೊಳ್ಳಿ
ಎಳ್ಳು ತಂದಿದ್ದೇನೆ ಬೀರಲು......

ಬೇಗ ಹಣ್ಣಾಗಿಸಲು
ದ್ರಾವಕದಲ್ಲಿ ಅದ್ದಿದ ಬಾಳೆ
ಯಾರದೋ ಹದ ಪಾಕ
ಗಂಧಕ ಬಣ್ಣ ಬೆರೆತ ಅಚ್ಚು
ಎಳ್ಳು ತಂದಿದ್ದೇನೆ ಬೀರಲು.....

ಕಾಲು ಕೆಸರಾಗಿಸದೆ
ಫುಟ್ಪಾತಿನಲಿ ಕತ್ತರಿಸಿದ ಕಬ್ಬು
ಒಣಗುವ ಮುನ್ನವೇ ತಿನ್ನಿ
ಉಳಿದರೆ ಉರಿಸಲು ಒಲೆಯಿಲ್ಲ
ಎಳ್ಳು ತಂದಿದ್ದೇನೆ ಬೀರಲು.....

ಸುಗ್ಗಿ ಹಬ್ಬದ ಸಂಕ್ರಾಂತಿ
ಬೆಳೆವ ರೈತನ ಅರೆದ ಬೆಲ್ಲ
ಕಬ್ಬಿಗೆ ಬಿಗಿದ ನೇಣು
ಎಳ್ಳಿನೊಂದಿಗೆ ಬಿಡಿ ಕಣ್ಣೀರು
ಹಾದಿ ತಪ್ಪಿದ ಪ್ರಗತಿಗೆ
ದಿಕ್ಕು ಬದಲಿಸಿದ ಸೂರ್ಯನಿಗೆ
ಎಳ್ಳು ತಂದಿದ್ದೇನೆ ಬೀರಲು.....