ಸಂಪಾದಕೀಯ, ವಿವೇಕಹಂಸ, ಜುಲೈ ೨೦೧೫
ನಿರಹಂಕಾರವೆಂಬ ರಾಮಬಾಣ
‘ ಆಶ್ರಮದ ಬಾಲಕರೆಲ್ಲ ದೊಡ್ಡ
ಹಾಲ್ನಲ್ಲಿ ಮಲಗುತ್ತಿದ್ದರು. ಅದರ ಪಕ್ಕದ ಕೊಠಡಿಯಲ್ಲಿ ಬಾಗಿಲಿನ ಹತ್ತಿರವೆ ಯಜಮಾನರು
ಮಲಗುತ್ತಿದ್ದರು. ಬಾಲಕರು ರಾತ್ರಿವೇಳೆ ಮೂತ್ರ ವಿಸರ್ಜನೆಗೆ ಹೋಗಬೇಕಾದರೆ ‘ತಾತ’ ಎಂದು
ಕರೆಯುತ್ತಿದ್ದರು. ಯಜಮಾನರು ಕೂಡಲೆ ಎಚ್ಚರಗೊಂಡು ‘ಬಂದ’ ಎನ್ನುತ್ತಿದ್ದರು,
‘ಬಂದೆ’ ಎನ್ನುತ್ತಿರಲಿಲ್ಲ. ಯಾರಾದರೂ ತಮ್ಮನ್ನು ಕಾಣಲು ಬಂದಿರುವ ವಿಷಯ ತಿಳಿದಾಗಲೂ “ಬಂದ'' ಅಂತ ಹೇಳು ಎನ್ನುತ್ತಿದ್ದರೇ ಹೊರತು “ಬಂದೆ'' ಅಂತ ಹೇಳು ಎನ್ನುತ್ತಿರಲಿಲ್ಲ. ‘ಬಂದೆ’ ಎಂದರೆ ‘ನಾನು ಬಂದೆ’ ಎಂದಾಗುತ್ತದೆ.
ಅಹಂಕಾರ ಪ್ರವೇಶ ಮಾಡುತ್ತದೆ ಎಂದವರ ಭಾವನೆ.’ (ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರು, ಪ್ರೊ|| ವಿ. ಕೃಷ್ಣಶೆಟ್ಟಿ, ಪು. ೭೧). ಇದು ಹಿರಿಯ ಜೀವನವೊಂದರ ಒಂದು ಪಲುಕು. ಅಂದಿನ ಕಾಲಕ್ಕೆ
ಇಡೀ ನಗರವೇ ನಿಬ್ಬೆರಗಾಗುವಷ್ಟು ಶ್ರೀಮಂತಿಕೆಯನ್ನು ಹೊಂದಿದ್ದ ದೊಡ್ಡಣ್ಣ ಶೆಟ್ಟರು ಬಡ
ಮಕ್ಕಳಿಗೆಂದು ತಾವು ಸ್ಥಾಪಿಸಿದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಆಶ್ರಮದ ವಾರ್ಡನ್ ಆಗಿ ತಾವೇ
ನಿಂತು ಅವರನ್ನು ಪೋಷಿಸಿದ ಪ್ರೀತಿಯ ರೀತಿಯಿದು. ಬೆಂಗಳೂರೆಂಬ ಸಾಂಸ್ಕೃತಿಕ ನಗರಕ್ಕೆ ಮಾನವೀಯ
ಹೃದಯವನ್ನು ಅಳವಡಿಸುವುದಕ್ಕೆ ತಮ್ಮ ಬದುಕನ್ನೇ ಮುಡುಪಿರಿಸಿದ ಮಹನೀಯರಲ್ಲಿ ಮೊದಲ ಸಾಲಿನಲ್ಲಿ
ನಿಲ್ಲುವವರು ದೊಡ್ಡಣ್ಣ ಶೆಟ್ಟರು. ಅವರ ಬಗ್ಗೆ ಬರೆಯಹೊರಟರೆ ಅದೇ ಒಂದು ಸಂಪುಟವಾಗುತ್ತದೆ.
ಇಲ್ಲಿ ಈ ಪ್ರಸಂಗವನ್ನು ಉಲ್ಲೇಖಿಸಿದ ಕಾರಣವಿಷ್ಟೆ. ಅಹಂಕಾರವನ್ನು ಒಂದು ಎಳ್ಳಿನ ಮೊನೆಯಷ್ಟನ್ನೂ
ಉಳಿಸಿಕೊಳ್ಳದ ಈ ಮಹನೀಯರ ಜೀವನದರ್ಶನ ಎಷ್ಟು ಮಹತ್ತರವಾದದ್ದು ಎಂದು ತಿಳಿಸುವುದು.
ಅಹಂಕಾರವೆಂಬುದು
ಸೂಕ್ಷ್ಮರೂಪದಲ್ಲಿ ಪ್ರವೇಶಿಸಿ ಯಾವ ಯಾವ ರೂಪದಲ್ಲಿ ಬದುಕನ್ನು ಆವರಿಸಿಕೊಳ್ಳುತ್ತದೆ ಎಂಬುದನ್ನು
ಊಹಿಸಿಕೊಳ್ಳಲಸಾಧ್ಯ. ಪುರಾಣದಲ್ಲಾಗಲೀ ಚರಿತ್ರೆಯಲ್ಲಾಗಲೀ ಪತನಹೊಂದಿದವರನ್ನೊಮ್ಮೆ
ಪರಾಂಬರಿಸಿದಾಗ ಅರಿವಾಗುವುದು ಅವರ ಪತನಕ್ಕೆ ಕಾರಣ ಅವರ ಅಹಂಕಾರ. ಹಾಗೆಯೇ ಮಹಾತ್ಮರ ಬದುಕನ್ನು
ವೀಕ್ಷಿಸಿದಾಗ ತಿಳಿಯುವುದು ಅವರು ಎತ್ತರಕ್ಕೇರಲು ಮೆಟ್ಟಿ ನಿಂತಿದ್ದು ತಮ್ಮ ಅಹಂಕಾರವನ್ನೇ
ಎಂದು. ಶ್ರೀರಾಮಕೃಷ್ಣರನ್ನು ಎಲ್ಲರೂ ಅವತಾರಪುರುಷರೆಂದು ಆರಾಧಿಸಿದಾಗಲೂ ಅವರು ಹೇಳುತ್ತಿದ್ದುದು
“ ಎಲ್ಲ ಭವತಾರಿಣಿಯ ಇಚ್ಛೆ ಎಂದು. ಹಾಗೆಯೇ ವಿವೇಕಾನಂದರು
ತಮ್ಮ ಅಭಿಮಾನಿಗಳಿಗೆ ಹೇಳಿದ್ದು, “ ನನ್ನನ್ನು
ಇಲ್ಲಿಟ್ಟಿರುವುದು ಗುರು ಪರಮಹಂಸರ ಕರುಣೆ. ಅವರು ಇಚ್ಛಿಸಿದರೆ ಅವರ ರೋಮರೋಮಗಳಿಂದ ನೂರಾರು
ವಿವೇಕಾನಂದರು ನಿರ್ಮಾಣಗೊಳ್ಳಬಲ್ಲರು. ಈ ಬಗೆಯ ಶ್ರದ್ಧೆಯುಳ್ಳವರು ಮಾತ್ರವೇ ಅಹಂಕಾರವನ್ನು
ಇಲ್ಲವಾಗಿಸಿಕೊಂಡವರು ಮಾತ್ರವೇ ಮಹತ್ತರವಾದದ್ದನ್ನು ಸಾಧಿಸಲು ಸಾಧ್ಯ. ವಾಲಿಗೆಂತಹ ಅಹಂಕಾರ! ರಾವಣನನ್ನೇ
ಕಂಕುಳಿನಲ್ಲಿರಿಸಿಕೊಂಡು ಸಪ್ತಸಮುದ್ರಗಳಲ್ಲಿ ಅದ್ದಿತೆಗೆದೆ, ಇಂದ್ರಮಾಲೆಯನ್ನೇ ಕೊರಳಲ್ಲಿ ಧರಿಸಿದೆ, ದುಂದುಭಿಯನ್ನು ಕೊಂದೆ, ಹೀಗೆ. ರಾವಣನಿಗೆ ಶಿವನಿಂದಲೇ ಆತ್ಮಲಿಂಗ ಪಡೆದ ಅಹಂಕಾರ, ಕುಬೇರನನ್ನು ಕಾಡಿಸಿದ ಅಹಂಕಾರ. ಆದರೆ ಇವರಿಬ್ಬರನ್ನೂ ದಂಡಿಸಿದ್ದು
ಶ್ರೀರಾಮ. ಪಟ್ಟಾಭಿಷೇಕದಿಂದ, ಸಿಂಹಾಸನಾರೋಹಣದಿಂದ
ಒಂದರೆಕ್ಷಣದಲ್ಲಿ ವಂಚಿತನಾದರೂ ವಿಹ್ವಲಗೊಳ್ಳದೆ ಯಾರನ್ನೂ ಶಪಿಸದೆ ಅತ್ಯಂತ ಸರಳ ಉಡುಗೆ ತೊಟ್ಟು
ಕಾಡಿಗೆ ನಡೆದ ನಿರಹಂಕಾರಿ ರಾಮ. ಹೀಗಾಗಿಯೇ ರಾವಣನ ಮಾಯಾಸ್ತ್ರಗಳಿಗಿಂತ ರಾಮನ ನಿರಹಂಕಾರದ
ರಾಮಬಾಣವೇ ಹೆಚ್ಚು ಪರಿಣಾಮಕಾರಿ. ಜಗವೆಂಬ ಅಹಂಕಾರ ವಿಲಾಸದಲ್ಲಿ, ಅಹಂಕಾರ ವಿಹಾರದಲ್ಲಿ ನಾನೆಂಬ ಅಹಂ ಹೂವಾಗಿ ಅರಳುವುದೋ ಹಾವಾಗಿ
ಕಾಡುವುದೋ ಎಂಬುದನ್ನು ಗಮನಿಸುತ್ತಲೇ ಇರಬೇಕು. ಹಾಗೆಂದ ಮಾತ್ರಕ್ಕೆ ನೆನೆದ ಅವಲಕ್ಕಿಯಂತೆ
ಮೆದುವಾಗಿ ಎಲ್ಲರಿಂದ ಘಾತಕ್ಕೊಳಪಡಬೇಕು ಎಂದಲ್ಲ. ಸೀತೆಯನ್ನು ಹಿಂದಿರುಗಿ ಪಡೆಯಲು ಶ್ರೀರಾಮ
ಪ್ರಯತ್ನಮಾಡಿದ್ದರಿಂದಲ್ಲವೇ ಅವನ ಕೋದಂಡಕ್ಕೆ ಗೌರವ ಮೂಡಿದ್ದು. ಅಭಿಮಾನಕ್ಕೆರವಾಗದಂತೆ
ಅಹಂಕಾರವನ್ನು ಮೊಟಕಿಸುತ್ತಾ ಮುಂದೆ ಸಾಗಬೇಕು. ಇದೇ ಜೀವನದ ಸಾಫಲ್ಯತೆಯ ಗುಟ್ಟು.